ADVERTISEMENT

ತಡವಾಗಿ ಬಂದ ಕಳಕಪ್ಪ ಬಂಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:15 IST
Last Updated 20 ಅಕ್ಟೋಬರ್ 2012, 9:15 IST

ಮೈಸೂರು: ದಸರಾ ಕಾರ್ಯಕ್ರಮಗಳಿಗೆ ವಿಳಂಬವಾಗಿ ಆಗಮಿಸುವುದು ಇಲ್ಲವೆ ಗೈರು ಹಾಜರಾಗುವುದು ಮಾಮೂಲಿ ಎಂಬಂತಾಗಿದೆ. ಇದರಿಂದಾಗಿ ನಗರದ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ದಸರಾ ಕಾರ್ಯಕ್ರಮ ಎರಡು ಗಂಟೆ ವಿಳಂಬವಾಗಿ ಆರಂಭವಾಯಿತು.

ಆಮಂತ್ರಣ ಪತ್ರಿಕೆಯಲ್ಲಿ 12 ಗಂಟೆಗೆ ಉದ್ಘಾಟನೆ ಎಂದು ಪ್ರಕಟಿಸಲಾಗಿತ್ತು. ಸರಿಯಾದ ಸಮಯಕ್ಕೆ ಸಭಾಂಗಣಕ್ಕೆ ಹೋದರೆ, ಕಾರ್ಯಕ್ರಮವನ್ನು ಅರ್ಧ ಗಂಟೆ ಮುಂದೂಡಲಾಗಿದೆ ಎಂದು ಆಯೋಜಕರು ಹೇಳಿದರು. ಆದಾಗ್ಯೂ, 12.30 ಗಂಟೆಗೆ ಆರಂಭ ವಾಗಬೇಕಾದ ಕಾರ್ಯಕ್ರಮ 1.30 ಗಂಟೆಗೆ ಆರಂಭ ವಾಯಿತು. ಸ್ವಾಗತ, ನಾಡಗೀತೆ ಮುಗಿ ಯುವಷ್ಟರಲ್ಲಿ 2.10 ಗಂಟೆ ಆಗಿತ್ತು.

ಜಿಲ್ಲೆಯ ವಿವಿಧ ತಾಲ್ಲೂಕುಗಳ ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರು, ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿ ದ್ದರು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಜಿ.ಬಂಡಿ ಅವರ ಬರುವಿಕೆ ಯಾಗಿ ಕಾದು ಕಾದು ಸುಸ್ತಾದರು. ಹಲವರು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಮನೆಯತ್ತ ತೆರಳಿದರು.

ಸಾಧಕರಿಗೆ ಸನ್ಮಾನ: ಮಹಿಳಾ ದಸರಾ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವಿ.ವಿ.ರತ್ನಾ ಅರಸ್, ರತ್ನಾ ಸತ್ಯೇಂದ್ರ, ಅನು ಮಂಜುನಾಥ್, ರತ್ನಾ ಮಹದೇವಮ್ಮ, ಮೈಸೂರು ತಾಲ್ಲೂಕು ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷೆ, ಆದರ್ಶ ಸೇವಾ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ, ನಂಜನಗೂಡಿನ ಹೇಮಾವತಿ, ಎ.ಲತಾ ಅವರನ್ನು ಸನ್ಮಾನಿಸಲಾಯಿತು.

ಸಚಿವ ಚಾಲನೆ:  ಮಹಿಳಾ ದಸರಾಕ್ಕೆ ಸಚಿವ ಕಳಕಪ್ಪ ಬಂಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, `ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾಳೆ. ಪುರುಷನಿಗೆ ಸರಿ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಯುದ್ಧ ಭೂಮಿ, ವಿಮಾನಯಾನ, ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾಳೆ.

ಇಂದಿರಾ ಗಾಂಧಿ, ಮೀರಾ ಕುಮಾರಿ ಹಾಗೂ ಸುಷ್ಮಾ ಸ್ವರಾಜ್ ರಾಜಕೀಯದಲ್ಲಿ ತಮ್ಮದೇಯಾದ ಛಾಪು ಮೂಸಿದ್ದಾರೆ. ಧರ್ಮ ಉಳಿಯಲು, ಸಂಸಾರ ಸುಗಮವಾಗಿ ಸಾಗಲೂ ಮಹಿಳೆ ಕಾರಣಳಾಗಿದ್ದಾಳೆ~ ಎಂದು ಮಹಿಳೆಯರ ಗುಣಗಾನ ಮಾಡಿದರು.

ಉಪ ವಿಶೇಷಾಧಿಕಾರಿ ಡಾ.ಅಜಯ್ ನಾಗಭೂಷಣ್, ಉಪ ಸಮಿತಿ ಕಾರ್ಯಾಧ್ಯಕ್ಷ ಎನ್.ಆರ್.ವಿಜಯ್, ಕಾರ್ಯದರ್ಶಿ ಜಿ.ಸಿ.ಚಂದ್ರಪ್ಪ, ಅಧ್ಯಕ್ಷೆ ಎ.ವಿ.ವಿದ್ಯಾ ಅರಸ್, ಉಪಾಧ್ಯಕ್ಷರಾದ ಮಂಗಳಾ ಸೋಮಶೇಖರ್, ತೇಜಾ ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT