ADVERTISEMENT

ತಲಕಾಡು ಕಾಲೇಜಿಗೆ ಸೌಲಭ್ಯ: ಭರವಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:05 IST
Last Updated 15 ಫೆಬ್ರುವರಿ 2012, 6:05 IST

ತಿ.ನರಸೀಪುರ: ತಲಕಾಡಿನ ಪದವಿ ಪೂರ್ವ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಲು ತಮ್ಮ ಅನುದಾನದಿಂದ ಹಣ  ನೀಡುವುದಾಗಿ ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.

ತಾಲ್ಲೂಕಿನ ತಲಕಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಭಾನುವಾರ ನಡೆದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆರ್‌ಐಡಿಎಫ್ ನಬಾರ್ಡ್ ಯೋಜನೆಯಡಿ ಈ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಇನ್ನೂ ಅನೇಕ ಕೊಠಡಿಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದೀರಿ, ನನ್ನ ಅನುದಾನದಲ್ಲಿ  ರಂಗ ಮಂಟಪ ನಿರ್ಮಿಸಲು ಹಣ ನೀಡುವುದಾಗಿ ತಿಳಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ರೂ.25 ಲಕ್ಷದಲ್ಲಿ ಒಂದು ದೊಡ್ಡ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಇಲ್ಲಿಯೂ ಕೂಡ ಉತ್ತಮ ಗ್ರಂಥಾಲಯ ಅಗತ್ಯವಿದ್ದು, ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಂಗ ಮಾಡಿ ಉತ್ತಮ ಅಂಕ ಪಡೆದು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಕರೆ ನೀಡಿದರು.

ಕೊಠಡಿಗಳನ್ನು ಉದ್ಘಾಟಿಸಿದ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿ, ಕಾಲೇಜಿಗೆ ಅಗತ್ಯವಿರುವ ಶೌಚಾಲಯ, ಪ್ರಯೋಗಾಲಯ ಸೇರಿದಂತೆ ಇನ್ನಿತರ  ಮೂಲಸೌಲಭ್ಯಗಳನ್ನು ದೊರಕಿಸುವುದಾಗಿ ತಿಳಿಸಿದರು.

ಇದೇ ವೇಳೆ ಪ್ರಾಂಶುಪಾಲ ಜೋಸೆಫ್ ಮಾತನಾಡಿದರು. ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರರಾಜು, ಆರ್.ಮಲ್ಲಯ್ಯ, ಶ್ರೀಕಂಠಪ್ಪ, ತಾ.ಪಂ ಸದಸ್ಯರಾದ ಮಲ್ಲಾಜಮ್ಮ, ಟಿ.ಎಸ್.ಸುಬ್ರಹ್ಮಣ್ಯ, ಲೋಕೋಪಯೋಗಿ ಎಇಇ ಜನಾರ್ಧನ್, ಮೋಹನ್, ಮಾಜಿ ಸದಸ್ಯ ನರಸಿಂಹಮಾದನಾಯಕ, ಪುರಸಭೆ ಮಾಜಿ ಅಧ್ಯಕ್ಷ ಡಿ.ಪದ್ಮನಾಭ್, ತಾ.ಪಂ.ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಸತೀಶ್‌ನಾಯಕ್, ರಾಜು, ಚಂದ್ರು, ಕೋಕಿಲ, ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.
ಮಡೆಸ್ನಾನ ಪದ್ಧತಿ: ಶಾಸಕ ಖಂಡನೆ
ತಿ.ನರಸೀಪುರ: ದೇವರ ಹೆಸರಿನಲ್ಲಿ ಮೌಢ್ಯದ ಪ್ರದರ್ಶನ ಹಾಗೂ ಚಟುವಟಿಕೆಗಳು ನಿಲ್ಲಬೇಕು ಎಂದು ಶಾಸಕ                 ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
 ತಾಲ್ಲೂಕಿನ ತಲಕಾಡಿನ ಕಾವೇರಿಪುರ ರಸ್ತೆಯಲ್ಲಿ ಗ್ರಾಮದ ದಿವಂಗತ ಹೊನ್ನಯ್ಯ ಅವರ ಪುತ್ರ ರಾಜು ಸಹೋದರರು ನಿರ್ಮಿಸಿರುವ ಚಾಮುಂಡೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ ನಂಬಿಕೆಗಳಿರಲಿ ಆದರೆ ಮೌಢ್ಯತೆ ಪ್ರದರ್ಶನವಿರಬಾರದು. ಬೇರೆಯವರು ತಿಂದ ಎಂಜಲೆಲೆ ಮೇಲೆ ಉರುಳಿಸುವ ಮಡೆ ಸ್ನಾನದಂತಹ ಪದ್ಧತಿಗಳನ್ನು ಖಂಡನೀಯ ಎಂದರು.
ತಲಕಾಡಿನ ಮಾಧವಮಂತ್ರಿ ಅಣೆಕಟ್ಟು ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ನಾಲೆಗಳಲ್ಲಿ ನೀರು ಪೂರೈಸುವ ಸಂಬಂಧ ಅಧಿಕಾರಿಗಳಿಗೆ ತಿಳಿಸುವುದಾಗಿ ಇದೇ ವೇಳೆ ಹೇಳಿದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿದರು.
ತಾ.ಪಂ ಸದಸ್ಯರಾದ ಮಲ್ಲಾಜಮ್ಮ, ಟಿ.ಎಸ್.ಸುಬ್ರಹ್ಮಣ್ಯ, ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರರಾಜು, ಆರ್.ಮಲ್ಲಯ್ಯ, ಲೋಕೋಪಯೋಗಿ ಎಇಇ ಜನಾರ್ಧನ್, ಮೋಹನ್, ಜಿ.ಪಂ ಎಇಇ ಎಸ್.ಆರ್.ಪುರುಷೋತ್ತಮ್, ತಾ.ಪಂ ಮಾಜಿ ಸದಸ್ಯ ನರಸಿಂಹಮಾದನಾಯಕ, ಮುಖಂಡ ಸುನಿಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಸತೀಶ್ ನಾಯಕ್, ರಾಜು, ಚಂದ್ರು, ಕೋಕಿಲ, ಕಲಿಯೂರು ವೆಂಕಟೇಶ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.