ADVERTISEMENT

ನಾಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:45 IST
Last Updated 3 ಜೂನ್ 2011, 6:45 IST

ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 127ನೇ ಜಯಂತಿ ಅಂಗವಾಗಿ ಅರಸು ಮಂಡಲಿ ಸಂಘದಿಂದ ಜೂ.4ರಂದು ನಗರದ ಕೆ.ಆರ್.ವೃತ್ತದಲ್ಲಿ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಮೆರವಣಿಗೆ ಆಯೋಜಿಸಿರುವುದಾಗಿ ಅರಸು ಮಂಡಲಿ ಸಂಘದ ಅಧ್ಯಕ್ಷ ಎ.ಆರ್.ನಿರಂಜನರಾಜೇ ಅರಸ್ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅರಸು ಮಹಾಮಂಡಲಿ, ಅರಸು ಮಂಡಲಿ ಸಹಕಾರ ಸಂಘ, ಅರಸು ಯುವಜನ ವೇದಿಕೆ, ವಾಣಿವಿಲಾಸ ಅರಸು ಮಹಿಳಾ ಸಂಘ, ಅರಸು ಅಸೋಸಿಯೇಷನ್ ಸಹಯೋಗದಲ್ಲಿ  ಅಂದು ಬೆಳಿಗ್ಗೆ 10ಗಂಟೆಗೆ  ಅರಸು ಮಂಡಲಿ ಸಂಘದಿಂದ ಮೆರವಣಿಗೆ ಹೊರಟು ಅಗ್ರಹಾರ, ಸಂಸ್ಕೃತ ಪಾಠಶಾಲೆ ಮೂಲಕ ಕೆ.ಆರ್.ವೃತ್ತ ತಲುಪಿ ನಂತರ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಉದ್ಘಾಟನೆಯನ್ನು ಸಂಸದ ಎಚ್.ವಿಶ್ವನಾಥ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ನೆರವೇರಿಸಲಿದ್ದಾರೆ. 1902ರಿಂದ 1940ರವರೆಗೆ ಆಡಳಿತ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಥಮ ಬಾರಿಗೆ ಮೈಸೂರು ನಗರಕ್ಕೆ ವಿದ್ಯುತ್ ಬೆಳಕನ್ನು ಒದಗಿಸಿದರು, ಕ್ಷಯ ರೋಗ ಆಸ್ಪತ್ರೆ ಕಟ್ಟಿಸಿದರು, ಮೈಸೂರು ವಿವಿ, ಮೈಸೂರು ಬ್ಯಾಂಕ್ ಸ್ಥಾಪಿಸಿದರು ಎಂದು ಅವರ ಸಾಧನೆ ವಿವರಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ಸೇವೆಯನ್ನು ಭಾರತ ಸರ್ಕಾರ ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಹಾಗೂ ಮೈಸೂರು ನಗರ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಅರಸು ಮಂಡಲಿ ಉಪಾಧ್ಯಕ್ಷ ಪಿ.ಕೆ.ಚಿದಾನಂದದೇವರಾಜೇ ಅರಸ್, ಗೌರವ ಕಾರ್ಯದರ್ಶಿ ಎಂ.ವಿ. ಮಲ್ಲರಾಜೇ ಅರಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.