ADVERTISEMENT

ನೈಸ್‌ಗೆ ಹೆಚ್ಚುವರಿ ಭೂಮಿ: ರೈತಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 9:50 IST
Last Updated 5 ಮಾರ್ಚ್ 2011, 9:50 IST

ಮೈಸೂರು: ‘ಬೆಂಗಳೂರು-ಮೈಸೂರು ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ನೈಸ್ ಕಂಪೆನಿಗೆ ಹೆಚ್ಚುವರಿ ಭೂಮಿ ನೀಡುವುದು ಸರಿಯಲ್ಲ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.

‘ಈಗಾಗಲೇ ರಸ್ತೆ ನಿರ್ಮಾಣಕ್ಕೆ ಏಳು ಸಾವಿರ ಎಕರೆ ಜಮೀನು ನೀಡಿರುವುದಕ್ಕೆ ರೈತ ಸಂಘದ ಸಹಮತವಿದೆ. ಆದರೆ, ಯಾವುದೇ ಕಾರಣಕ್ಕೂ ಹೆಚ್ಚುವರಿ ಭೂಮಿಯನ್ನು ನೈಸ್ ಸಂಸ್ಥೆಗೆ ನೀಡಬಾರದು. ಅಲ್ಲದೆ, ಈಗಾಗಲೇ ಭೂಮಿಯನ್ನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ನೈಸ್ ಈಗಾಗಲೇ ಪಡೆದುಕೊಂಡಿದೆ. ಆದರೆ, ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ಹೆಚ್ಚುವರಿಯಾಗಿ 15 ಸಾವಿರ ಎಕರೆ ಭೂಮಿ ನೀಡುವುದು ನ್ಯಾಯಯುತವಲ್ಲ. ಯಾವುದೇ ಕಾರಣಕ್ಕೂ ಇನ್ನು ಮುಂದೆ ನೈಸ್‌ಗೆ ರೈತರ ಭೂಮಿಯನ್ನು ನೀಡಬಾರದು’ ಎಂದು ಒತ್ತಾಯಿಸಿದರು.

‘ನೈಸ್ ನಯವಂಚಕ ಸಂಸ್ಥೆ ಆಗಿದೆ. 1996ರಲ್ಲಿ ಭೂಮಿ ನೋಟಿಫಿಕೇಷನ್ ಆಗಿದ್ದು, 16 ವರ್ಷಗಳಿಂದ ರೈತರಿಗೆ ಉಳುಮೆ ಮಾಡಲು ಮತ್ತು ಪರಭಾರೆಗೆ ಬಿಡುತ್ತಿಲ್ಲ. ಅಲ್ಲದೆ, ರೈತರಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲ. ಆ ಮೂಲಕ ರೈತರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ’ ಎಂದರು.

‘ನೈಸ್ ಸಂಸ್ಥೆಯ ವಿರುದ್ಧ ಈಗಾಗಲೇ ಬೆಂಗಳೂರು ಭಾಗದ ರೈತರು ಕೈಗೊಂಡಿರುವ ಪ್ರತಿಭಟನೆಗೆ ರೈತ ಸಂಘ ನೈತಿಕ ಬೆಂಬಲ ನೀಡಿದೆ. ನೈಸ್ ಮಾಲೀಕ ಅಶೋಕ್ ಖೇಣಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದ್ದು, ಸಿಎಂ ಈ ಕುರಿತು ಮಾತನಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

9ರಂದು ದೆಹಲಿ ಚಲೋ: ‘ಕೇಂದ್ರ ಸರ್ಕಾರದ ಬೀಜ ಕಾಯಿದೆ ನೀತಿ ವಿರೋಧಿಸಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.9ರಂದು ದೆಹಲಿಯಲ್ಲಿ ರಸ್ತೆ ತಡೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ವಿವಿಧ ರಾಜ್ಯಗಳಿಂದ ಲಕ್ಷಾಂ ತರ ಮಂದಿ ರೈತರು ಭಾಗವಹಿಸು ವರು. ಕರ್ನಾಟಕದಿಂದ ಸುಮಾರು 2,500 ರೈತರು ಪಾಲ್ಗೊಳ್ಳುವ  ನಿರೀಕ್ಷೆ’ ಇದೆ ಎಂದು ಹೇಳಿದರು.

‘ಬೆಳಗಾವಿಯಲ್ಲಿ ಮಾ.11ರಿಂದ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಉದ್ಘಾಟಿಸಿಸುವುದು ಬೇಡ. ಸರ್ಕಾರ  ಮರು ಚಿಂತನೆ ಮಾಡಲಿ’ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ನಂಜುಂಡೇಗೌಡ, ಸ್ವಾಮಿಗೌಡ, ನಿಸಾರ್ ಅಹಮ್ಮದ್, ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.