ADVERTISEMENT

ನೋಂದಣಿ ವಿಳಂಬ: ಅಧಿಕಾರಿಗೆ ರೈತರ ತರಾಟೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 8:50 IST
Last Updated 14 ಜೂನ್ 2011, 8:50 IST

ಎಚ್.ಡಿ.ಕೋಟೆ: ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿಗಳು ವಿಳಂಬವಾಗುತ್ತಿದೆ ಎಂದು ತಾಲ್ಲೂಕಿನ ರೈತರು ನೋಂದಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.

ತಾಲ್ಲೂಕಿನ ರೈತರು ಬಿತ್ತನೆ ಬೀಜ, ಗೊಬ್ಬರ ಮುಂತಾದ ವ್ಯವಸಾಯದ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇದ್ದು, ಇದಕ್ಕಾಗಿ ಬ್ಯಾಂಕಿನಲ್ಲಿ ತಮ್ಮ ಆಸ್ತಿಯನ್ನು ಅಡವಿಟ್ಟು ಸಾಲಪಡೆದು ಈ ಚಟುವಟಿಕೆಗಳಿಗೆ ಬಳಸಿಕೊಳ್ಳ ಬೇಕಾಗಿದೆ.
 
ಇದಕ್ಕಾಗಿ ವಾರಗಟ್ಟಲೆ ನೋಂದಣಾಧಿಕಾರಿ ಕಚೇರಿಗೆ ಅಲೆ ಯುತ್ತಿದ್ದು ನೋಂದಣಿಗಳು ವಿಳಂಬ ವಾಗುತ್ತಿವೆ. ಇದರಿಂದಾಗಿ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ನೋಂದಣಾಧಿಕಾರಿ ಕಚೇರಿಯ ಮುಂಭಾಗ ಕಾಯುತ್ತಾ ಕುಳಿತರೂ, ನಾಳೆ ಬನ್ನಿ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ ಎಂದು ರೈತರ ಆರೋಪಿಸಿದರು.

ಇದರಿಂದ ರೊಚ್ಚಿಗೆದ್ದ ರೈತರು ಮತ್ತು ಮುಖಂಡರು ಉಪ ನೋಂದಣಾಧಿಕಾರಿ ಕೆ.ಎನ್. ನಾಗ ರಾಜು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಚೇರಿಯ ಗಣಕ ಯಂತ್ರಕ್ಕೆ ಹೊಸದಾಗಿ ಪ್ಯಾಚಪ್ (3.1) (ಕಾವೇರಿ ಮತ್ತು ಭೂಮಿ) ಅಳವಡಿಸಿದ ನಂತರ ಗಣಕ ಯಂತ್ರದಲ್ಲಿ ಹಲವು ಸಮಸ್ಯೆಗಳು ಉದ್ಭವಗೊಂಡು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಆದ್ದರಿಂದ ನೋಂದಣಿ ಕಾರ್ಯ ವಿಳಂಬವಾಗುತ್ತಿದೆ ಎಂದರು.

ಕಳೆದ 10 ದಿನಗಳಿಂದ ನೋಂದಣಿ ಕಾರ್ಯ ಸರಿಯಾಗಿ ಮಾಡಲು ಆಗುತ್ತಿಲ್ಲ. ಇದರಿಂದ ನಮ್ಮ ಕಚೇರಿಗೆ ಒಂದು ಕಂಪ್ಯೂಟರ್‌ನ್ನು ನೀಡಬೇಕೆಂದು ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಮಾಡಿದ್ದೇನೆ ಎಂದರು.ಇನ್ನೆರಡು ದಿನಗಳಲ್ಲಿ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಮುಖಂಡ ಚಾ.ನಂಜುಂಡಮೂರ್ತಿ, ಕುಮಾರ ಸ್ವಾಮಿ, ಎ.ಎನ್. ಸೋಮಣ್ಣ, ನಾಗರಾಜಶೆಟ್ಟಿ, ಸಿದ್ದಲಿಂಗನಾಯಕ, ಪುಟ್ಟೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.