ADVERTISEMENT

ಪರಮಹಂಸರ ವಚನ ಓದಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:10 IST
Last Updated 2 ಜನವರಿ 2012, 10:10 IST

ಮೈಸೂರು: ಶ್ರೀರಾಮಕೃಷ್ಣರ 175ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವೇಕ ಪ್ರಭ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ನಗರದ ಯಾದವಗಿರಿಯಲ್ಲಿರುವ ಆಶ್ರಮದ ಸಭಾಂಗಣದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ವಿವೇಕ ಪ್ರಭ ವಿಶೇಷ ಸಂಚಿಕೆ `ಶ್ರೀರಾಮಕೃಷ್ಣ ಬೋಧಾಮೃತ~ ವನ್ನು ಸಾಹಿತಿ ಡಾ.ಪ್ರಭುಶಂಕರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಪರಮಹಂಸರ ಬೋಧನೆಗಳು ಮಾತೃ ಸಂಹಿತೆಯಾಗಿದ್ದು, ಗೊಂದ ಲಗಳಿಗೆ ಅವಕಾಶ ಇಲ್ಲದೆ ಭಗವಂತನನ್ನು ಕಾಣಬಹುದಾಗಿದೆ. ರಾಮಕೃಷ್ಣರ ಉಪದೇಶಗಳು ಹೃದಯವನ್ನು ನೇರವಾಗಿ ಪ್ರವೇಶಿಸುತ್ತಿವೆ. ಅವರ ಉಪದೇಶ ತಿಳಿದುಕೊಳ್ಳಲು ಯಾವುದೇ ಭಾಷೆ ಓದಬೇಕಾಗಿಲ್ಲ. ಸಂದೇಶವನ್ನು ಲೀಲಜಾಲವಾಗಿ ಅರ್ಥ ಮಾಡಿಕೊಳ್ಳಬಹುದು ಎಂದರು.

ಕೆಲವರಿಗೆ ಜೀವನದಲ್ಲಿ ಹಣ ಸಂಪಾದನೆ, ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂಬ ಆದರ್ಶ ಇರುತ್ತದೆ. ಆದರೆ ಪರಮಹಂಸರಿಗೆ ಈಶ್ವರ ದರ್ಶನವೇ ಗುರಿಯಾಗಿತ್ತು. ಅವನನ್ನು ಮಾತನಾಡಿಸುವ ಮೂಲಕ ಸಿದ್ಧಿ ಪಡೆದುಕೊಳ್ಳಬೇಕು ಅಂದುಕೊಂಡಿದ್ದರು. ಪರಮಹಂಸರ ವಚನ ವೇದಾಂತವನ್ನು ಎಲ್ಲರೂ ಓದುವುದು ಅವಶ್ಯವಾಗಿದೆ. ಅನೇಕ ಉಪಮೇಯ ಮತ್ತು ಉಪದೇಶಗಳ ಮೂಲಕ ದೇವರನ್ನು ಕಾಣುವ ಹೆದ್ದಾರಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸ್ವಾಮಿ ಭಗವದಾನಂದಜೀ ಅವರು ಹಾಡಿದ `ನಿನೊಬ್ಬನೊಡನಿರಳು ಜಗವೆಲ್ಲಾ ಎದುರಾದೆ ಭಯವೇನು, ಭಯವೇನು, ಭಯವೇನು ಗುರವೇ, ಶಾರದಾ ರೂಪ ತಾಳಿ ಬಂದಿಹಳು ತಾಯಿ ಕಾಳಿ~ ಎಂಬ ಭಜನೆಗಳು ಭಕ್ತರನ್ನು ಆಕರ್ಷಿಸಿತು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು, ರಾಮಕೃಷ್ಣ ವಿದ್ಯಾಶಾಲಾ ಅಧ್ಯಾಪಕ ಎಸ್.ಎಸ್.ರಮೇಶ್ ಮಾತನಾಡಿದರು.
ಪರಹಿತನಂದಜೀ ಸ್ವಾಗತಿಸಿದರು. ಸ್ವಾಮಿ ವಿರೇಶಾನಂದಜೀ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.