ADVERTISEMENT

ಬೆಟ್ಟದಪುರದಿಂದ ಜೆಡಿಎಸ್ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:23 IST
Last Updated 4 ಡಿಸೆಂಬರ್ 2012, 8:23 IST

ಪಿರಿಯಾಪಟ್ಟಣ: ತಾಲ್ಲೂಕಿನ ಪ್ರಮುಖ ರಸ್ತೆ ಹಾಗೂ ಪಿರಿಯಾಪಟ್ಟಣ-ಬೆಟ್ಟದಪುರ ರಾಜ್ಯ ಹೆದ್ದಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ತಾಲ್ಲೂಕು ಜೆಡಿಎಸ್ ಘಟಕವು ಬೆಟ್ಟದಪುರದಿಂದ ಪಿರಿಯಾಪಟ್ಟಣದ ವರೆಗೆ ಸೋಮವಾರ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ವಿನೂತನವಾಗಿ ಪ್ರತಿಭಟಿಸಿತು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕೆ.ಮಹದೇವ್ ನೇತೃತ್ವದಲ್ಲಿ ಬೆಟ್ಟದಪುರದ ಮುಖ್ಯ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಶಾಸಕ ಕೆ.ವೆಂಕಟೇಶ್ ಹಾಗೂ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಪ್ರತಿಭಟನಾಕಾರರು 14 ಕೀ.ಮಿ. ಪಿರಿಯಾಪಟ್ಟಣದ ವರೆಗೆ ಪಾದಯಾತ್ರೆ ಕೈಗೊಂಡು ಪಟ್ಟಣದ ಬೆಟ್ಟದಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ 1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ, ಶಾಸಕ ಕೆ.ವೆಂಕಟೇಶ್ ಅವರ ಪ್ರತಿಕೃತಿಯನ್ನು ದಹನ ಮಾಡಿದರು.

ಅಲ್ಲದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವ ಮನವಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರು

ಶಾಸಕರ ವಿರುದ್ಧ ಆಕ್ರೋಶ
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಮಹದೇವ್ ಮಾತನಾಡಿ, ಕಳೆದ ನಾಲ್ಕುವರೆ ವರ್ಷಗಳಿಂದ ತಾಲ್ಲೂಕಿನ ಅಭಿವೃದ್ಧಿಯನ್ನು ಮರೆತಿರುವ ಶಾಸಕರಿಗೆ ತಾಲ್ಲೂಕಿನ ಪ್ರಮುಖ ರಸ್ತೆಯ ಬಗ್ಗೆ ಕಾಳಜಿ ಇಲ್ಲ. ಈ ರಸ್ತೆಯಲ್ಲಿ ವಾಹನಗಳಿರಲಿ, ಸೈಕಲ್ ಸವಾರರು ಕೂಡ ಓಡಾಡಲು ಅಸಾಧ್ಯವಾಗಿದೆ. ತಾಲ್ಲೂಕಿನಲ್ಲಿ ಭಾರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಮತದಾರರಿಗೆ ಮೋಸ ಮಾಡುತ್ತಿರುವ ಶಾಸಕ ಕೆ.ವೆಂಕಟೇಶ್ ಅವರಿಗೆ ಈ ಬಾರಿ ಚುನಾವಣೆಯಲ್ಲಿ  ಮತದಾರರು ಬುದ್ಧಿ ಕಲಿಸಲಿದ್ದಾರೆ ಎಂದರು.

ನಾಲ್ಕು ಬಾರಿ ಈ ರಸ್ತೆಯನ್ನು ಗುಂಡಿ ಮುಚ್ಚಲು ವರ್ಷಕ್ಕೆ ರೂ.40 ಲಕ್ಷಗಳಂತೆ ಖರ್ಚು ಮಾಡಿರುವ ಹಣ ಎಲ್ಲಿಗೆ ಹೋಗಿದೆ? ಎಂದು ಪ್ರಶ್ನಿಸಿದ ಅವರು ತಾಲ್ಲೂಕಿನ ಅಭಿವೃದ್ಧಿಯನ್ನು ಮರೆತು ಬರೀ ಹಣ ಮಾಡುವುದೇ ವೃತ್ತಿಯಾನ್ನಾಗಿಸಿಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ಜನರನ್ನು ವಂಚಿಸುತ್ತಿದ್ದಾರೆ. ಈ ರಸ್ತೆಯನ್ನು ಇನ್ನು 15  ದಿನಗಳೊಳಗೆ ಸರಿಪಡಿಸಿ, ಸಂಚಾರ ಯೋಗ್ಯ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎಂ.ಕೆ.ಸುಚಿತ್ರಾ, ಸದಸ್ಯ ಎಂ.ಪಿ.ಚಂದ್ರೇಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎ.ಶಿವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರವಿನಾಯಕ್, ಉಪಾಧ್ಯಕ್ಷೆ ಯೋಗೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜವರಪ್ಪ, ಆರ್.ಎಸ್.ಮಹದೇವ್, ಪವಿತ್ರಯೋಗೇಶ್, ರಘುನಾಥ್, ಅತ್ತರ್‌ಮತೀನ್, ಶಂಕರೇಗೌಡ, ಪ್ರಕಾಶ್, ರತ್ನಮ್ಮ ಮಹದೇವ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ವಿದ್ಯಾಶಂಕರ, ಎಸ್.ಸಿ.ಘಟಕದ ಅಧ್ಯಕ್ಷ ಚನ್ನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ, ಟೌನ್ ಪಂಚಾಯ್ತಿ ಉಪಾಧ್ಯಕ್ಷ ತಿಮ್ಮನಾಯಕ, ಮುಖಂಡರಾದ ಕೆ.ಕೆ.ಕುಮಾರ್, ತಮ್ಮಯ್ಯ, ಹೇಮಂತ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಲೋಕೇಶ್, ಆಂಜನೇಯ, ಅಪೂರ್ವ ಮೋಹನ್, ಕೆ.ರಮೇಶ್, ವಿನೋದ್, ಚೆಲುವಯ್ಯ, ಮುನಿಯಪ್ಪ, ಜೆ.ಮಂಜು, ತಮ್ಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥ ಸಿಂಗ್, ವೇಣುಗೋಪಾಲ್ ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.