ADVERTISEMENT

ಭೋವಿ ಸಮಾಜದ ಸಮೀಕ್ಷೆಗೆ ಒತ್ತಾಯ

ಮೈಸೂರು ಜಿಲ್ಲಾ ಯುವ ಭೋವಿ ಬಳಗ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 4:10 IST
Last Updated 7 ಡಿಸೆಂಬರ್ 2017, 4:10 IST
ಮೈಸೂರು ಜಿಲ್ಲಾ ಯುವ ಭೋವಿ ಬಳಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬಸವರಾಜಪ್ಪ ಬುಧವಾರ ಉದ್ಘಾಟಿಸಿದರು
ಮೈಸೂರು ಜಿಲ್ಲಾ ಯುವ ಭೋವಿ ಬಳಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬಸವರಾಜಪ್ಪ ಬುಧವಾರ ಉದ್ಘಾಟಿಸಿದರು   

ಮೈಸೂರು: ಜಿಲ್ಲೆಯಲ್ಲಿರುವ ಭೋವಿ ಸಮಾಜದವರ ಸಮೀಕ್ಷೆ ನಡೆಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಬಸವರಾಜಪ್ಪ ಇಲ್ಲಿ ಬುಧವಾರ ಒತ್ತಾಯಿಸಿದರು.

ಜಿಲ್ಲಾ ಯುವ ಭೋವಿ ಬಳಗ ಉದ್ಘಾಟಿಸಿ ಮಾತನಾಡಿದರು. ಈಗ ಉದ್ಘಾಟನೆಗೊಂಡಿರುವ ಯುವ ಭೋವಿ ಬಳಗವು ಜನಾಂಗದವರ ಸಮೀಕ್ಷೆ ನಡೆಸಬೇಕು. ಬಳಗದ ಸದಸ್ಯರಾಗಲು ₹ 5 ಸಾವಿರ ನೋಂದಣಿ ಶುಲ್ಕ ನಿಗದಿಪಡಿಸಿದರೆ ಯಾರು ತಾನೇ ಸದಸ್ಯರಾಗಲು ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದರು. ಕನಿಷ್ಠ ₹ 1 ಶುಲ್ಕ ನಿಗದಿ ಮಾಡಿದರೆ ಎಲ್ಲರೂ ಸದಸ್ಯರಾಗುತ್ತಾರೆ. ಆಗ ಬಳಗಕ್ಕೆ ಒಂದು ಶಕ್ತಿ ಬರುತ್ತದೆ ಎಂದರು.

ಭೋವಿ ಸಮಾಜದ ಅಭಿವೃದ್ಧಿಗೆ ಒಂದು ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ. ಇದರ ಲಾಭ ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು. ಇದರಿಂದ ಸಿಗುವ ಲಾಭಗಳನ್ನು ಸಮಾಜದ ಎಲ್ಲರಿಗೂ ತಲುಪಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಎಲ್ಲ ಜಿಲ್ಲೆಗಳಲ್ಲೂ ಇಂತಹ ಯುವ ಸಂಘಗಳು ಆರಂಭವಾಗಬೇಕು. ಈಗ ಸುಮಾರು 200 ಸಂಘಗಳು ಸಮಾಜದಲ್ಲಿವೆ. ಇವುಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆಯನ್ನು ಕೇಳಬೇಕಾದ ಜರೂರು ಇದೆ. ಸಂಘಗಳು ಸ್ಥಾಪನೆಯಾಗುವುದು ಸುಮ್ಮನೇ ಕೂರುವುದಕ್ಕಲ್ಲ. ಸಮಾಜದ ಒಳಿತಿಗೆ ಏನಾದರೂ ಮಾಡಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ಡಿ.ಪಿ.ಕೆ.ಪರಮೇಶ್, ಗೌರವ ಅಧ್ಯಕ್ಷ ಟಿ.ಕೃಷ್ಣಪ್ಪ, ಉಪಾಧ್ಯಕ್ಷರಾದ ದಿನೇಶ್, ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಜಿ.ಉಮೇಶ್ ಭಾಗವಹಿಸಿದ್ದರು.

ಪಾಂಡವಪುರ ತಾಲ್ಲೂಕಿನ ಕಲ್ಲು ಕ್ವಾರೆಯಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟ ನಾರಾಯಣಪ್ಪ ಅವರ ಕುಟುಂಬಕ್ಕೆ ಧನಸಹಾಯದ ಚೆಕ್‌ ವಿತರಿಸಲಾಯಿತು.

5 ಮಂದಿ ಬಡವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು. ಜನಾಂಗದ 50 ಮಂದಿ ಸರ್ಕಾರಿ ನೌಕರರು, ಮುಖಂಡರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.