ADVERTISEMENT

ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಲು ಮುಂದಾಗಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 6:35 IST
Last Updated 7 ಫೆಬ್ರುವರಿ 2012, 6:35 IST

ಸಾಲಿಗ್ರಾಮ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ತಿಳಿವಳಿಕೆ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಶಿಕ್ಷಕರು ಮನವಿ ಮಾಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಜೆ.ಜವರೇಗೌಡ ಹೇಳಿದರು.

ಹೊಸ ಅಗ್ರಹಾರ ಹೋಬಳಿ ಭೇರ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈಚೆಗೆ ಆಯಾೀಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿಂಗಪ್ಪ ಮತ್ತು ಮಾಯಿಗೇಗೌಡ ಅವರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಸ್ವಾಮಿ, ಶಿಕ್ಷಣ ಸಂಯೋಜಕಿ ಪ್ರಮೀಳ, ರಾಜ್ಯ ಶಿಕ್ಷಕರ ಸಂಘದ ನಿರ್ದೇಶಕಿ ಗಾಯಿತ್ರಿ, ಶಿವೇಗೌಡ, ಮುಖ್ಯಶಿಕ್ಷಕರಾದ ವೆಂಕಟೇಶ್, ರಾಮಕೃಷ್ಣ, ನಾಗರಾಜ್, ಭಾಸ್ಕರ್ ಉಪಸ್ಥಿತರಿದ್ದರು.

ಮತಾಂತರ ತಡೆಗೆ ಆಗ್ರಹ
ಹುಣಸೂರು: ಪಟ್ಟಣದಲ್ಲಿನ ಸಕ್ರಿನಾ ಅಂತ್ಯಕಾಲ ಪ್ರಾರ್ಥನಾ ಮಂದಿರದಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಕೃತ್ಯ ನಿರಂತರವಾಗಿ ನಡೆದಿದೆ. ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಕೊಡಗು ಗೌಡ ಸಮಾಜದ ಸದಸ್ಯರು ಸೋಮವಾರ ಇಲ್ಲಿನ ಕಲ್ಪತರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರತ್ನಾಪುರಿ ರಸ್ತೆಯಲ್ಲಿನ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದಲ್ಲಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ. ಇದರಿಂದಾಗಿ ಅನೇಕ ಕುಟುಂಬಗಳು ಒಡೆದು ಅತಂತ್ರವಾಗಿವೆ ಎಂದು ಮುಖಂಡ ಲಕ್ಷ್ಮಣ್ ಆರೋಪಿಸಿದರು.

ಹಿಂದುಳಿದ ವರ್ಗದವರನ್ನು ಮತ್ತು ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಗಿರಿಜನರಿಗೆ ಆಮಿಷ ಒಡ್ಡಿ ಮತಾಂತರಿಸಲಾಗುತ್ತಿದೆ. ಇದರಿಂದ ಬಹುಪಾಲು ಗಿರಿಜನರು ಕ್ರಿಶ್ಚಿಯನ್ ಸಂಸ್ಕೃತಿಯನ್ನೇ ಪಾಲಿಸುತಿದ್ದಾರೆ. ಇದೇ ಪರಿಸ್ಥಿತಿ ಕೊಡಗು ಗೌಡ ಸಮಾಜದ ಹಲವು ಕುಟುಂಬಗಳಿಗೂ ಬಂದಿದೆ. ಇದನ್ನು ತಡೆಗಟ್ಟಲೇ ಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಕಲ್ಪತರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ಮಾಡಿದರು. ನಂತರ ಉಪವಿಭಾಗಾಧಿಕಾರಿ ಲಿಂಗಮೂರ್ತಿಗೆ ಮನವಿ ನೀಡಿದರು.

ಸಮಾಜದ ಮುಖಂಡರಾದ ದೇವಯ್ಯ, ಮಂಜುನಾಥ್, ಕಾರ್ಯಪ್ಪ, ಬಾಲಕೃಷ್ಣ, ಪುಟ್ಟರಾಜ್ ಮತ್ತು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.