ADVERTISEMENT

ಮೈಸೂರಿಗೆ ಬಂದ ನೌಕಾಪಡೆ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:45 IST
Last Updated 20 ಮಾರ್ಚ್ 2012, 8:45 IST

ಮೈಸೂರು: ಮುಂಬೈನ ಭಾರತೀಯ ನೌಕಾಪಡೆಯ ಐಎನ್‌ಎಸ್ ಮೈಸೂರು ಯೋಧರ ತಂಡ ಮುಂಬೈನಿಂದ ಹೊರಟಿದ್ದ ಸೈಕಲ್ ಜಾಥಾ ಸೋಮವಾರ ಸಂಜೆ ನಗರವನ್ನು ತಲುಪಿತು.

ಭಾರತೀಯ ನೌಕಾಪಡೆಯ 12 ಮಂದಿ ಯೋಧರು ಮಾ.10 ರಂದು ಮುಂಬೈನಿಂದ ಸೈಕಲ್ ಜಾಥಾ ಹೊರಟಿದ್ದರು. ಮುಂಬೈ, ಮುರುದ್, ಡಬೋಲ್, ರತ್ನಗಿರಿ, ವಿಜಯದುರ್ಗ, ಪಣಜಿ, ಕಾರವಾರ, ಮಂಗಳೂರು ಮತ್ತು ಮಡಿಕೇರಿ ಮಾರ್ಗವಾಗಿ 1400 ಕಿ.ಮೀ. ಕ್ರಮಿಸಿ ಸಂಜೆ 5 ಗಂಟೆ ಸುಮಾರಿಗೆ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸೈಕಲ್ ಜಾಥಾ ಆಗಮಿಸಿತು.

ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್, ಜಿಲ್ಲಾ ಎಸ್ಪಿ ಆರ್.ದಿಲೀಪ್, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಸೇರಿದಂತೆ ಇತರೆ ಗಣ್ಯರು ಜಾಥಾದಲ್ಲಿ ಬಂದವರನ್ನು ಹಾರ ಹಾಕಿ ಸಂಭ್ರಮದಿಂದ ಬರಮಾಡಿಕೊಂಡರು.

ಭಾರತೀಯ ನೌಕಾಪಡೆ ಐಎನ್‌ಎಸ್ ಮೈಸೂರು ಕಮಾಂಡೆಂಟ್ ಕ್ಯಾಪ್ಟನ್ ಕೃಷ್ಣ ಸ್ವಾಮಿನಾಥನ್ ಅವರು ಮಾತನಾಡಿ, `ಮುಂಬೈನಲ್ಲಿರುವ ಭಾರತೀಯ ನೌಕಾಪಡೆಯ ಐಎನ್‌ಎಸ್ ತಂಡಕ್ಕೆ ಮೈಸೂರು ಎಂದು ಹೆಸರು ಸೇರಿಸಲಾಗಿದೆ. ಐಎನ್‌ಎಸ್ ಮೈಸೂರು ನೌಕಾದಳಕ್ಕೆ ಸೇರಿದ ಹಡಗು ರಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧೆಡೆ ಸಂಚರಿಸುತ್ತದೆ. ಮೈಸೂರಿನ ಹಿರಿಮೆ ಎಲ್ಲ ದೇಶಗಳಲ್ಲಿಯೂ ಪ್ರಚುರವಾಗುತ್ತಿದೆ. ಸಾಂಸ್ಕೃತಿಕ ನಗರಿಯ ಹೆಸರನ್ನು ನೌಕಾಪಡೆಗೆ ಇಟ್ಟಿರುವುದು ಮುಂಬೈ ನೌಕಾಪಡೆ ತಂಡಕ್ಕೆ ಹೆಮ್ಮೆ ತಂದಿದೆ~ ಎಂದು ಹೇಳಿದರು.

ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಅವರು ಮಾತನಾಡಿ, `ಮುಂಬೈನಿಂದ ಮೈಸೂರಿಗೆ ಸೈಕಲ್‌ನಲ್ಲಿ ಬಂದಿರುವುದು ಸಾಧಾರಣ ವಿಷಯವಲ್ಲ. ಬೇಸಿಗೆ ಯಲ್ಲಿ ನೌಕಾಪಡೆ ಯೋಧರು 1400 ಕಿ.ಮೀ. ಕ್ರಮಿಸಿರುವುದು ಶ್ಲಾಘನೀಯ. ಮೈಸೂರಿನ ಹೆಸರು ಮುಂಬೈ ನೌಕಾಪಡೆ ಐಎನ್‌ಎಸ್ ತಂಡದಲ್ಲಿರುವುದು ಹರ್ಷ ತಂದಿದೆ~ ಎಂದು ತಿಳಿಸಿದರು.

ಸೈಕಲ್ ಜಾಥಾದ ನಾಯಕ ಸೆಂಥಿಲ್‌ಕುಮಾರ್ ಅವರು ಜಾಥಾದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.

ಗ್ರೂಪ್ ಕ್ಯಾಪ್ಟನ್ ಚಂದನ್, ಕಮಾಂಡರ್ ಸೋಮನಾಥ್ ಘೊಷ್, ಸುಬ್ರಹ್ಮಣ್ಯ ಉಪಸ್ಥಿತ ರಿದ್ದರು. ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.