ಹುಣಸೂರು: ತಾಲ್ಲೂಕಿನ ಬನ್ನಿಕುಪ್ಪೆ ಹೋಬಳಿ ಭಾಗದ ಕೃಷಿ ಭಾಗ್ಯ ಯೋಜನೆ ಫಲಾನುಭವಿಗಳ ಹೊಲಗಳಿಗೆ ಹೆಚ್ಚುವರಿ ಕೃಷಿ ನಿರ್ದೇಶಕ ಗಂಗಪ್ಪ ಭೇಟಿ ನೀಡಿ ಕೃಷಿ ಹೊಂಡಗಳ ಬಳಕೆ ಕುರಿತು ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿ, ರೈತರು ತಗ್ಗು ಪ್ರದೇಶದಲ್ಲಿ ಹೊಂಡ ನಿರ್ಮಿಸಿ ಮಳೆ ನೀರು ಸಂಗ್ರಹಿಸಿ ವ್ಯವಸಾಯಕ್ಕೆ ಬಳಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಕೃಷಿ ಹೊಂಡ ಫಲಕಾರಿಯಾಗಿರುವುದು ಕಂಡು ಬಂದಿದೆ ಎಂದರು.
ಬನ್ನಿಕುಪ್ಪೆ ಪಂಚಾಯಿತಿ ವ್ಯಾಪ್ತಿಯ ರೈತರಾದ ರಾಮಚಂದ್ರನಾಯಕ, ಪುರುಷೋತ್ತಮ್ ಮತ್ತು ಪುಟ್ಟಬೋವಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರಾಮಚಂದ್ರನಾಯಕ ಅವರು ವಾಣಿಜ್ಯ ಬೆಳೆಯೊಂದಿಗೆ ತರಕಾರಿ ಬೇಸಾಯ ಮಾಡುತ್ತಿದ್ದಾರೆ. ಅಲ್ಲದೆ, ಕೃಷಿ ಹೊಂಡದಲ್ಲಿ 3 ಸಾವಿರ ಮೀನು ಸಾಕಣೆ ಮಾಡಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ 2015ರಿಂದ 2017 ರವರೆಗೆ 418 ಕೃಷಿ ಹೊಂಡ ನಿರ್ಮಾಣವಾಗಿವೆ. 2017–18ರಲ್ಲಿ 200 ಹೊಂಡ ನಿರ್ಮಿಸುವ ಗುರಿ ಹೊಂದಲಾಗಿದೆ. ಕಸಬಾ ಹೋಬಳಿ ರೈತರು ಯೋಜನೆ ಅತಿ ಹೆಚ್ಚು ಲಾಭ ಪಡೆದಿದ್ದಾರೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಜಯಕುಮಾರ್, ಡಿ.ದಿವಾಕರ್, ಮುಸ್ತಾಫ್ ಹಕಿಂ ಪಾಷಾ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.