ADVERTISEMENT

ವಲಸೆ ಬಂದ ಅಪೌಷ್ಟಿಕ ಮಕ್ಕಳ ಸಮೀಕ್ಷೆಗೆ ಕ್ರಮ: ಸಿಇಒ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:27 IST
Last Updated 18 ಡಿಸೆಂಬರ್ 2012, 10:27 IST

ಮೈಸೂರು: ಹೊರ ಜಿಲ್ಲೆಗಳಿಂದ ಮೈಸೂರು ಜಿಲ್ಲೆಗೆ ಕಬ್ಬು ಬೆಳೆ ಮತ್ತಿತರ ಕೂಲಿ ಕೆಲಸಕ್ಕಾಗಿ ವಲಸೆ ಬರುವ ಕೂಲಿ ಕಾರ್ಮಿಕರ ಮಕ್ಕಳ ಅಪೌಷ್ಟಿಕತೆಬಗ್ಗೆ ಕಂದಾಯ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಗಳಿಂದ ಸಮೀಕ್ಷೆ ಕೈಗೊಂಡು ಸಮರ್ಪಕ ಪೌಷ್ಟಿಕ ಆಹಾರ ಪೂರೈಸುವ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ಹೇಳಿದರು.

ಮೈಸೂರು ಆಕಾಶವಾಣಿ ಕೇಂದ್ರದ ಕೃಷಿರಂಗ ವಿಭಾಗವು ಭಾನುವಾರ ಏರ್ಪಡಿಸಿದ್ದ `ಅನ್ನ-ಚಿನ್ನ ಪೌಷ್ಟಿಕ ಆಹಾರ ಪ್ರಾಮುಖ್ಯತೆ ಹಾಗೂ ಅಪೌಷ್ಟಿಕತೆ ನಿವಾರಣೆ' ಕುರಿತ ನೇರ ಫೋನ್ ಇನ್ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳ ವಿವಾಹ, ಆರ್ಥಿಕ ತೊಂದರೆ, ಬೇಗ ಗರ್ಭಿಣಿಯಾಗುವ ಮತ್ತು ಪೌಷ್ಟಿಕ ಆಹಾರದ ಮಾಹಿತಿ ಕೊರತೆ ಮುಂತಾದ ಕಾರಣ ಗಳಿಂದ ಸಮಸ್ಯೆ ಕಾಡುತ್ತಿದೆ.

ಇದಕ್ಕಾಗಿ ಮೈಸೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಕಳೆದ ಜುಲೈ ನಿಂದ ಪ್ರತಿ ಗರ್ಭಿಣಿ ಮತ್ತು ಬಾಣಂತಿಗೆ ತಿಂಗಳಿಗೆ 10 ಕೆ.ಜಿ. ಆಹಾರಧಾನ್ಯ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 1 ಕೆ.ಜಿ. ತೊಗರಿ ಹಾಗೂ 4 ಕೆ.ಜಿ. ಗೋಧಿ, 3 ಕೆ.ಜಿ.ಅಕ್ಕಿ ವಿತರಿಸಲಾಗುತ್ತಿದೆ. ಅಂಗನವಾಡಿ ಕೇಂದ್ರ ಕ್ಕೆ ಬರುವ ಮಕ್ಕಳಿಗೂ ಮೊಳಕೆಕಾಳು, ಹೆಸರು ಕಾಳು, ಬೆಲ್ಲ, ಅಕ್ಕಿ, ಗೋಧಿಯಿಂದ ತಯಾರಿಸಿದ ಪೌಷ್ಟಿಕ ಆಹಾರ, ಮಧ್ಯಾಹ್ನ ಅನ್ನ ಸಾಂಬಾರು, ವಾರಕ್ಕೊ ಮ್ಮೆಹಾಲು, ಮೊಟ್ಟೆ ನೀಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT