ADVERTISEMENT

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:33 IST
Last Updated 4 ಡಿಸೆಂಬರ್ 2012, 8:33 IST

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಹಾಗೂ ಬೇಗೂರು ಹೋಬಳಿಯಲ್ಲಿ ಅಸಮರ್ಪಕ ವಿದ್ಯುತ್ ವಿತರಣೆಯಿಂದಾಗಿ ತುಂಬಾ ತೊಂದರೆಯಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದರು.

ತಾಲ್ಲೂಕಿನ ಬೇಗೂರು ಗ್ರಾಮದಲ್ಲಿರುವ ಸೆಸ್ಕ್ ಕಚೇರಿ ಮುಂಭಾಗದಲ್ಲಿ ರೈತರು ಹಾಗೂ ಸಾರ್ವಜನಿಕರು ಹಮ್ಮಿ ಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪದೇ ಪದೇ ವಿದ್ಯುತ್ ನಿಲುಗಡೆ ಮಾಡುವುದರಿಂದ ರೈತರು ಬೆಳೆದ ಬೆಳೆ ಒಣಗುತ್ತಿದೆ. ಈ ಬಾರಿ ಸಮರ್ಪಕವಾಗಿ ಮಳೆಯೂ ಆಗಿಲ್ಲ, ಕೂಡಲೇ ನಿರಂತರವಾಗಿ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ಅಂಗಡಿ ಮುಂಗಟ್ಟುಗಳು, ಬೇಕರಿ ಹಾಗೂ ಇತರೆ ವ್ಯಾಪಾರಸ್ಥರು ವಿದ್ಯುತ್ ಇಲ್ಲದೇ ತೊಂದರೆಯಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ನಾಗಶೆಟ್ಟಿ ಮಾತನಾಡಿ, ವಿದ್ಯುತ್ ಸಮಸ್ಯೆಯಿಂದಾಗಿ ಬೇಗೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಿಸಲು ಪ್ರತ್ಯೇಕವಾಗಿ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದರು.

ಸೆಸ್ಕ್‌ನ ಅಧಿಕಾರಿ ನಂದಿನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅವರು, ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಹದಿನೈದು ದಿನದೊಳಗಾಗಿ ಸಮಸ್ಯೆ ಬಗೆ ಹರಿಯಲಿದೆ ಎಂದು ಅವರು ಹೇಳಿದರು.

ಮಲ್ಲಿಕಾರ್ಜುನಸ್ವಾಮಿ, ಸುಬ್ರಹ್ಮಣ್ಯ, ಬಿ. ರಾಚಶೆಟ್ಟಿ, ಹೊಟೇಲ್ ನಟರಾಜು, ಪುಟ್ಟಣ್ಣ, ಕೂಸಶೆಟ್ಟಿ, ಭಾಸ್ಕರ್, ದೀಪು, ಪ್ರಶಾಂತ್, ಪುನೀತ್, ಸೆಂದಿಲ್, ಪುಟ್ಟಸ್ವಾಮಿ, ಶಿವಕುಮಾರ್, ವೆಂಕಟೇಶ್, ರಿಯಾಜ್‌ಪಾಷ, ಅಶೋಕ್, ನಾಗೇಶ್, ಕಿರಣ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.