ADVERTISEMENT

ಸಮಾನತೆಯ ಸಮಾಜ ನಿರ್ಮಾಣವಾಗಲಿ-ಮಹಾದೇವ್

​ಪ್ರಜಾವಾಣಿ ವಾರ್ತೆ
Published 10 ಮೇ 2012, 8:25 IST
Last Updated 10 ಮೇ 2012, 8:25 IST

ತಿ.ನರಸೀಪುರ: ಬಸವಣ್ಣನವರ ಆಶಯಕ್ಕೆ ಪೂರಕವಾಗಿ ಸಮಾನತೆ ಹಾಗೂ ಐಕ್ಯತೆಯ ಸಮಾಜ ನಿರ್ಮಾಣವಾಗಬೇಕು ಎಂದು ಮಾಜಿ ಸಚಿವ ಎಂ.ಮಹಾದೇವ್ ಹೇಳಿದರು.

ತಾಲ್ಲೂಕಿನ ಹೊಸೂರುಹುಂಡಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವೇಶ್ವರ ಯುವಕರ ಸಂಘ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಗ್ರಾಮದಲ್ಲಿ ಇಂದು ಸಾಮರಸ್ಯ ಇಲ್ಲ. ದ್ವೇಷ, ಅಸೂಯೆ, ಅಸಮಾನತೆಯ ಮನೋಭಾವಗಳೇ ಕಾಣುತ್ತವೆ. ದ್ವೇಷ ಮನೋಭಾವ ತೊರೆದು ಬಸವಣ್ಣನವರ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಂಡು ಗ್ರಾಮಗಳಲ್ಲಿ ಐಕ್ಯತೆ ಮತ್ತು ಸಮಾನತೆ ಸಾರಬೇಕು. ಜಾತೀಯತೆ ತೊಲಗಿಸಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಅರ್ಥ ಬರಬೇಕಾದಲ್ಲಿ ಸಮಾನತೆ ಮತ್ತು ಸೋದರತ್ವ ಗುಣಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಎಂ.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಿರಕ್ತಮಠದ ಶಿವಲಿಂಗ ದೇಶಿಕೇಂದ್ರ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗುರು ಸ್ವಾಮೀಜಿ, ಮಲ್ಲಪ್ಪ ಸ್ವಾಮೀಜಿ ಇದ್ದರು.

ರಾಜ್ಯ ರೈತ ಸಂಘಟನೆಗಳ ಪ್ರಧಾನ ಸಂಚಾಲಕ ಕುರುಬೂರು ಶಾಂತಕುಮಾರ್, ತಾಲ್ಲೂಕು ವೀರಶೈವ ಮಹಾ ಸಭಾದ ಅಧ್ಯಕ್ಷ ಕೈಯಂಬಳ್ಳಿ ನಟರಾಜು, ಮಾಜಿ ಅಧ್ಯಕ್ಷ ಶಿವನಂಜಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮೂಗೂರು ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ನಾಗರಾಜು,  ಮು.ರು.ನಾಗೇಂದ್ರಕುಮಾರ್, ಲಿಂಗದೇವರ ಕೊಪ್ಪಲಿನ ಬಿ.ಕೆ.ಪ್ರಾಣೇಶ್‌ಜಿ, ಸಿ.ಬಿ.ಹುಂಡಿ ಪ್ರಕಾಶ, ತೊಟ್ಟವಾಡಿ ಮಹಾದೇವಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರೂಪಶ್ರೀ ಪರಮೇಶ್, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್,  ಕೆ.ಆರ್.ಷಣ್ಮುಖಸ್ವಾಮಿ, ಬೆಟ್ಟಯ್ಯ, ಪಾಲಾಕ್ಷಮೂರ್ತಿ, ಮಹಾದೇವಪ್ಪ, ನಾಗಣ್ಣ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.