ADVERTISEMENT

ಸಮುದಾಯ ರೇಡಿಯೊ ಜನಧ್ವನಿಯಾಗಲಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 6:05 IST
Last Updated 25 ಫೆಬ್ರುವರಿ 2012, 6:05 IST

ಸರಗೂರು: ಧ್ವನಿ ಇಲ್ಲದವರ ನೋವಿಗೆ ಧ್ವನಿ ನೀಡುವಲ್ಲಿ ಸಮುದಾಯ ರೇಡಿಯೊಗಳು ಕೆಲಸ ಮಾಡಬೇಕು ಎಂದು ರಾಜ್ಯಸಭಾ ಸದಸ್ಯೆ, ನಟಿ ಡಾ. ಬಿ.ಜಯಶ್ರೀ ಸಲಹೆ ಮಾಡಿದರು.

ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆ ಆವರ ಣದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ `ಜನಧ್ವನಿ~ ಸಮುದಾಯ ರೇಡಿಯೊ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿ ಜನಧ್ವನಿ ರೇಡಿಯೊ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಕಥೆ ಹಾಗೂ ಹಾಡುಗಳನ್ನು ಹೇಳುತ್ತೇನೆ. ಗ್ರಾಮೀಣ ಜನರ ಸಮಸ್ಯೆ, ಸಂಸ್ಕೃತಿ, ಕಲೆ, ಸಂಗೀತ, ಆದಿವಾಸಿ ಗಳ ಕಲೆಗಳನ್ನು ಇಲ್ಲಿ ಬಿತ್ತರವಾಗಬೇಕು ಎಂದರು.

`ಗಜವಧನ ಹೇರಂಭ~ ಎಂಬ ಗಣಪನ ಸ್ತುತಿಯನ್ನು ಪ್ರಥಮವಾಗಿ ಹಾಡಿದರು. ಅದನ್ನು ಜನಧ್ವನಿ ರೇಡಿಯೊದಲ್ಲಿ  ಪ್ರಸಾರ ಮಾಡಲಾಯಿತು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಿಇಒ ಡಾ.ಎಂ.ಎ.ಬಾಲಸುಬ್ರಹ್ಮಣ್ಯಂ ಮಾತನಾಡಿ, ಪ್ರಥಮವಾಗಿ ಗ್ರಾಮೀಣ ಪ್ರದೇಶದಲ್ಲಿ ರೇಡಿಯೊ ಕೇಂದ್ರ ತೆರೆಯಲಾಗಿದ್ದು, ಆರಂಭದಲ್ಲಿ ದಿನದಲ್ಲಿ 30 ನಿಮಿಷ ಮಾತ್ರ ಪ್ರಸಾರ ಆಗುತ್ತದೆ. ಮೂರು ತಿಂಗಳ ನಂತರ ಹೆಚ್ಚಿನ ಸಮಯವನ್ನು  ಪ್ರಸಾರ ಮಾಡಲಾಗುತ್ತದೆ ಎಂದರು.

ಯೂತ್ ಮೂವ್‌ಮೆಂಟ್‌ನ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ಮುಖ್ಯಸ್ಥೆ ಬಿ.ಟಿ. ಪೋಷಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಜನರಲ್ ಮ್ಯಾನೇಜರ್ ಆರ್.ನರಸಿಂಹಸ್ವಾಮಿ, ಕಂಠೀರವ ಸ್ಟುಡಿಯೊ ವ್ಯವಸ್ಥಾಪಕ ನಿರ್ದೇಶಕ ವಿಶುಕುಮಾರ್, ಬೀಚನಹಳ್ಳಿ ಸಮುದಾಯ ಪ್ರತಿನಿಧಿ ನಾಗರತ್ನಾ, ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಎಂ.ಆರ್. ಸೀತಾರಾಮ್ ಹಾಜರಿದ್ದರು.

ನಿರ್ಲಕ್ಷ್ಯ- ಆರೋಪ: `ಜನಧ್ವನಿ~ ಸಮುದಾಯ ರೇಡಿಯೊ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರನ್ನು ಮತ್ತು ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೆಳಗಮ್ಮ ರಂಗಯ್ಯ ಆರೋಪಿಸಿದ್ದಾರೆ.

ತಾವು ಪರಿಶಿಷ್ಟ ಜಾತಿಯ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬರಲು ಆಹ್ವಾನ ಪತ್ರಿಕೆ ನೀಡಿದ್ದರು. ಹೀಗಾಗಿ ಭಾಗವಹಿಸಿದ್ದೆ. ಆದರೆ, ನನಗೆ ಗೌರವ ನೀಡಲಿಲ್ಲ. ಇದರಿಂದ ನೋವಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.