ADVERTISEMENT

ಸರಗೂರು ಬಂದ್ ಇಂದು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 6:45 IST
Last Updated 26 ಫೆಬ್ರುವರಿ 2011, 6:45 IST

 ಸರಗೂರು: ಪಟ್ಟಣದಲ್ಲಿ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಪೂರ್ಣ ನೆಲಸಮಗೊಳಿಸಿ  ಹೊಸದಾಗಿ ಕಟ್ಟಡವನ್ನು ನಿರ್ಮಿಸಬೇಕು ಎಂದು ಪಟ್ಟಣದ ವರ್ತಕರ ಮಂಡಳಿ ಮತ್ತು ಕರ್ನಾಟಕ ರಕ್ಷಣಾ   ವೇದಿಕೆ ಶನಿವಾರ ಸರಗೂರು ಬಂದ್‌ಗೆ ಕರೆ ನೀಡಿವೆ.ಈಗ ಇರುವ ಬಸ್ ನಿಲ್ದಾಣವನ್ನು ನೆಲಸಮಗೊಳಿಸದೆ ಅದಕ್ಕೆ ಹೊಂದಿಕೊಂಡಂತೆ ವಾಣಿಜ್ಯ ಮಳಿಗೆ,   ಹೋಟೆಲ್, ಶೌಚಾಲಯ ನಿರ್ಮಿಸಲು 80 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.

ಇನ್ನೆರಡು ದಿನಗಳಲ್ಲಿ ಬಸ್ ನಿಲ್ದಾಣದ ಕಾಮಗಾರಿ ಚಾಲನೆಗೊಳ್ಳಲಿದೆ. ಹೊಸ   ಕಟ್ಟಡ ನಿರ್ಮಿಸದೇ ಹೋದರೆ ನಾವು ಬಸ್   ನಿಲ್ದಾಣದ ನವೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ವರ್ತಕರ ಮಂಡಳಿ ಅಧ್ಯಕ್ಷ ಎಸ್.ನಾರಾಯಣ್  ಮತ್ತು ಕರವೇ ನಾಗೇಂದ್ರ ಎಚ್ಚರಿಸಿದ್ದಾರೆ.

ಹಿಂದೆ ಸಾರಿಗೆ ಸಚಿವರಾಗಿದ್ದ ದಿ.ರಾಚಯ್ಯ 1960 ರಲ್ಲಿ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈಗ ನಿಲ್ದಾಣವು   ಶಿಥಿಲವಾಗಿದೆ. ಮಳೆ ಬಂದರೆ ತಾರಸಿಯಲ್ಲಿ ನೀರು ನಿಲ್ಲುತ್ತಿದೆ. ಇದಕ್ಕೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿ  ಕಟ್ಟಡವನ್ನು ನಿರ್ಮಿಸಿದರೆ ಕಟ್ಟಡವು ಬೀಳುವುದು ಖಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಸರಗೂರು ತಾಲ್ಲೂಕು ಕೇಂದ್ರವಾಗಲಿದ್ದು ಮತ್ತೆ ಬಸ್ ನಿರ್ಮಾಣ ಮಾಡಬೇಕಾಗುತ್ತದೆ. ಆದುದರಿಂದ ಈಗಲೇ ಬಸ್ ನಿಲ್ದಾಣವನ್ನು ವಿಸ್ತಾರವಾಗಿ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲ  ವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಬಸ್ ನಿಲ್ದಾಣವನ್ನು ನವೀಕರಣದ ಕೆಲಸಕ್ಕೆ 80 ಲಕ್ಷಗಳು ಟೆಂಡರ್ ಆಗಿದ್ದು, ಈ ಟೆಂಡರ್ ರದ್ದು ಗೊಳಿಸಿ   ನೂತನವಾಗಿ ಎಚ್.ಡಿ.ಕೋಟೆಯಲ್ಲಿ 2.25 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಿರುವ ಹಾಗೆ ಇಲ್ಲಿಯು    ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.  

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೆಳಗಮ್ಮರಂಗಯ್ಯ ಹಾಗೂ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ  ಸದಸ್ಯರು, ವಿವಿಧ ಮಹಿಳಾ ಸಂಘಗಳು ಬಂದ್‌ನಲ್ಲಿ ಭಾಗವಹಿಸಲಿವೆ. ಆದ್ದರಿಂದ ಪಟ್ಟಣದ ವರ್ತಕರು  ತಮ್ಮ ವ್ಯಾಪಾರ ವಹಿವಾಟವನ್ನು ನಿಲ್ಲಿಸಿ ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.