ಕೆ.ಆರ್.ನಗರ: `ಪಟ್ಟಣದ ಸರ್ವೆ ಇಲಾಖೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ತಿದ್ದಿಕೊಳ್ಳದಿದ್ದಲ್ಲಿ ಲೋಕಾಯುಕ್ತ ಪೊಲೀಸರಿಗೆ ಹಿಡಿದು ಕೊಡಬೇಕಾಗುತ್ತದೆ~ ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಸಿದರು.
ಪಟ್ಟಣದ ಸರ್ವೆ ಇಲಾಖೆ ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ನಂತರ ಇಲ್ಲಿನ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ ಅವರು, ಹಣ ಇಲ್ಲದೇ ಇಲ್ಲಿನ ಯಾವ ಅಧಿಕಾರಿಯೂ ಕೆಲಸ ಮಾಡುತ್ತಿಲ್ಲ ಎಂದು ತಹಶೀಲ್ದಾರ್ ಮತ್ತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದ 15ದಿನದ ಒಳಗಾಗಿ 11ಇ ನಕ್ಷೆ ವಿತರಿಸಬೇಕಾಗುತ್ತದೆ. ಆದರೆ ಇಲ್ಲಿನ ಅಧಿಕಾರಿಗಳು ಅನಗತ್ಯವಾಗಿ ಅರ್ಜಿದಾರರಿಗೆ ವಿಳಂಬ ಮಾಡುತ್ತಿದ್ದಾರೆ.
ಹಣ ಇಲ್ಲದೇ ಯಾವ ಕೆಲಸವೂ ಮಾಡುತ್ತಿಲ್ಲ. ರೈತರೊಬ್ಬರು ಅರ್ಜಿ ಸಲ್ಲಿಸಿ ಎರಡೂವರೆ ತಿಂಗಳಾಗಿದೆ. ಹಣ ಕೊಡದೇ ಇರುವುದರಿಂದ 11ಇ ನಕ್ಷೆ ಇನ್ನೂವರೆಗೆ ವಿತರಿಸಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದರು.
ತಾ.ಪಂ.ಉಪಾಧ್ಯಕ್ಷ ಮೇಲೂರು ಕೃಷ್ಣೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗಣ್ಣ, ಪುರಸಭೆ ಸದಸ್ಯ ಕೆ.ಎಲ್. ಕುಮಾರ್, ಮುಖಂಡರಾದ ವೇಣು, ಉಮೇಶ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.