ADVERTISEMENT

ಸೆಮಿಸ್ಟರ್ ಗೆ ವಿರೋಧ: ಇಂದಿನಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:21 IST
Last Updated 8 ಜನವರಿ 2014, 6:21 IST

ಮೈಸೂರು: ಐಟಿಐನಲ್ಲಿ ಏಕಾಏಕಿ ಜಾರಿಗೆ ತಂದಿರುವ ಸೆಮಿಸ್ಟರ್‌ ಪದ್ಧತಿ ಕೈಬಿಡುವಂತೆ ಅಖಿಲ ಭಾರತ ಪ್ರಜಾಪ್ರಭುತ್ವ ಯುವಕರ ಸಂಘಟನೆ ಮತ್ತು ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿ ಒತ್ತಾಯಿಸಿವೆ.

ದಿಢೀರನೇ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಿರು­ವು­ದನ್ನು ವಿರೋಧಿಸಿ ಜ. 8ರಿಂದ ವಿವಿಧ ಸ್ವರೂಪದ ಹೋರಾಟ ನಡೆಸಲು ಆಲ್ ಇಂಡಿಯಾ ಡೆಮಾ ಕ್ರೆಟಿಕ್ ಯೂತ್ ಆರ್ಗನೈ ಸೇಷನ್ (ಎಐಡಿವೈಒ) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ನಿರ್ಧರಿಸಿದೆ.

ಡಿ. 23ರಂದು ‘ಬೆಂಗಳೂರು ಚಲೋ’ ನಡೆಸಿದಾಗ ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕರು ಸದ್ಯದಲ್ಲೇ ಸಿಹಿ ಸುದ್ದಿಯನ್ನು ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸೆಮಿಸ್ಟರ್ ಪದ್ಧತಿಯನ್ನು ರದ್ದುಗೊ ಳಿಸಿಲ್ಲ. ಪಠ್ಯಕ್ರಮದ ಬಗ್ಗೆ, ಶಿಕ್ಷಕರ ತರಬೇತಿಯ ಕುರಿತಂತೆ ಯಾವುದೇ ಪೂರ್ವತಯಾರಿಯನ್ನು ನಡೆಸದೇ ಇದ್ದ ಉದ್ಯೋಗ ಮತ್ತು ತರಬೇತಿ ಇಲಾಖೆಯು ಈಗ ಜನವರಿ ಹಾಗೂ ಫೆಬ್ರುವರಿಯಲ್ಲಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ.

ಹೀಗಾಗಿ, ಜ. 8ರಂದು ರಾಜ್ಯಾದ್ಯಂತ ಐಟಿಐ ತರಬೇತಿಯ ‘ತರಗತಿ ಬಹಿಷ್ಕಾರ’ ಚಳವಳಿಯನ್ನು ಹಮ್ಮಿಕೊಂಡಿದೆ. ಅಲ್ಲದೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಯನ್ನೂ ನಡೆಸಲಾಗುತ್ತದೆ. ಮುಂದೆ, ಮಾನವ ಸರಪಳಿ, ಪ್ರತಿಭಟನಾ ಮೆರವಣಿಗೆ ಮೊದಲಾದ ಸ್ವರೂಪದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.