ಕೆ.ಆರ್.ನಗರ: ತಾಲ್ಲೂಕಿನ ಕೆಂಪನಕೊಪ್ಪಲು ಗ್ರಾಮ ಹಲವು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ತಾಲ್ಲೂಕಿನ ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿಗೆ ಒಳ ಪಡುವ ಕೆಂಪನಕೊಪ್ಪಲು ಗ್ರಾಮ ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. 60ರಿಂದ 70 ಮನೆಗಳನ್ನು ಹೊಂದಿ ರುವ ಗ್ರಾಮದಲ್ಲಿ 300ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಇಲ್ಲಿರುವ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಳೆ ಬೆಳೆದು ನಿಂತಿವೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದ ಚರಂಡಿ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಕೆಲವು ಬೀದಿಗಳು ಸೊಳ್ಳೆಗಳ ತಾಣವಾಗಿದೆ. ಇಲ್ಲಿನ ರಸ್ತೆಗಳಿಗೆ ಡಾಂಬರ್ ಹಾಕಿದ ಉದಾರಣೆಗಳು ಇಲ್ಲ. ಅಲ್ಲದೇ ಪಟ್ಟಣಕ್ಕೆ ಸಂಪರ್ಕ ಒದಗಿಸುವ ರಸ್ತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಗ್ರಾಮದ ನೀರಿನ ಟ್ಯಾಂಕ್ ಕುಸಿಯುವ ಹಂತ ತಲುಪಿದರೂ ಅದೇ ನೀರಿನ ಟ್ಯಾಂಕ್ನಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತದೆ.
ತಾಲ್ಲೂಕಿನಲ್ಲಿ ಹಲವರು ಶಾಸಕರಾಗಿ, ಸಚಿವರಾಗಿ ಮತ್ತು ಸಂಸದರಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಈ ಗ್ರಾಮಕ್ಕೆ ಇನ್ನೂ ವರೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ಆರೋಪಿರುವ ಗ್ರಾಮಸ್ಥರು, ಗ್ರಾಮದ ರಸ್ತೆಗಳು, ಚರಂಡಿ ಮತ್ತು ನೀರಿನ ಟ್ಯಾಂಕ್ ದುರಸ್ತಿಗೊಳಿಸಬೇಕು. ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರೆಸ ಬೇಕು. ವಿದ್ಯುತ್ ಸಮಸ್ಯೆ ಪರಿಹರಿಸ ಬೇಕು. ಬೀದಿ ದೀಪ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.