ADVERTISEMENT

ಹಳಿಗಳ ಮೇಲೆ ಬಂತು ವಿವೇಕವಾಣಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 8:00 IST
Last Updated 22 ಜೂನ್ 2011, 8:00 IST

ಮೈಸೂರು: ನಗರದ ಅಶೋಕಪುರಂ ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ `ವಿವೇಕ ಎಕ್ಸ್‌ಪ್ರೆಸ್~ ರೈಲು ನೋಡುತ್ತ ನಿಂತಿದ್ದ ಹಲವರ ಮನಸ್ಸು 110 ವರ್ಷಗಳ ಹಿಂದೆ ಓಡಿತ್ತು.

1892ರಲ್ಲಿ ಸ್ವಾಮೀ ವಿವೇಕಾ ನಂದರು ಮೈಸೂರಿಗೆ ಬಂದು ಮೂರು ವಾರ ತಂಗಿದ್ದ ವಿಷಯ ರೈಲ್ವೆ ನಿಲ್ದಾಣ ದಲ್ಲಿ ಚರ್ಚೆಯ ವಸ್ತುವಾಯಿತು.

ಹೌದು, ಭಾರತೀಯ ರೈಲ್ವೆಯು ಜನವರಿ 12ರಂದು ಕೋಲ್ಕತ್ತದಿಂದ ಆರಂಭಿಸಿದ ವಿವೇಕ ಎಕ್ಸ್‌ಪ್ರೆಸ್ ರೈಲು ಈಗ ಅರಮನೆ ನಗರಿಗೆ ಬಂದು ತಲುಪಿದೆ. ಸ್ವಾಮಿ ವಿವೇಕಾನಂದರ ಬದುಕು ಮತ್ತು ಸಂದೇಶಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸಲು ನಾಲ್ಕು ದಿನಗಳವರೆಗೆ ಇಲ್ಲಿಯೇ ಇರಲಿದೆ.

ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ಆಗಮಿಸಿದ ಐದು ಬೋಗಿಗಳ ಈ ಪ್ರದರ್ಶನ ರೈಲಿನ ಎರಡು ಕಂಪಾರ್ಟ್‌ಮೆಂಟ್‌ಗಳಲ್ಲಿ ವಿವೇಕಾನಂದರ ಜೀವನ ಮತ್ತು  ಸಂದೇಶಗಳಿವೆ. ರಾಮಕೃಷ್ಣ ಪರಮ ಹಂಸರೊಂದಿಗೆ ವಿವೇಕಾನಂದರು ಇರುವ, ಕನ್ಯಾಕುಮಾರಿಯಲ್ಲಿ ವಿವೇಕಾನಂದರು ತಪಸ್ಸು ಮಾಡಿದ ಸ್ಥಳ ಚಿತ್ರ, ಅದೇ ದ್ವೀಪ ರಾತ್ರಿ ವಿದ್ಯುತ್ ದೀಪದಲ್ಲಿ ಕಾಣುವ ಬಗೆ ಕುರಿತ ಚಿತ್ರ,  ಬೇಲೂರು ಮಠ ಮತ್ತಿತರ ಮಠಗಳ ದೊಡ್ಡ ದೊಡ್ಡ ಚಿತ್ರಗಳಿವೆ.

ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ ನಂತರ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಅವರನ್ನು ಸೀಲ್ದಾ ರೈಲು ನಿಲ್ದಾಣದಲ್ಲಿ ಜನರು ಸ್ವಾಗತಿಸಿದ ಅಪರೂಪದ `ಕಪ್ಪು-ಬಿಳುಪು~ ಚಿತ್ರವೂ ಇದೆ.

ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಮತ್ತು ನೈಋತ್ಯ ರೈಲ್ವೆಯ ಈ ವಿಭಾಗೀಯ ರೈಲ್ವೆ ವ್ಯವಸ್ಥಾಪಕ  ರಾಕೇಶಕುಮಾರ್ ಗುಪ್ತ ಪ್ರದರ್ಶನ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಕ್ತಿದಾನಂದ ಸ್ವಾಮೀಜಿ, `ವಿವೇಕಾನಂದರ ಜೀವನ, ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಈ ಪ್ರದರ್ಶನ ಸಹಕಾರಿ. ಮೈಸೂರಿನಲ್ಲಿ ನಾಲ್ಕು ದಿನಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ವೀಕ್ಷಿಸುವ ನಿರೀಕ್ಷೆ ಇದೆ. ಸಾರ್ವಜನಿಕರೂ ಈ ಪ್ರದರ್ಶನವನ್ನು  ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು. ವಿವೇಕಾನಂದ ಸಂದೇಶಗಳು ಸರ್ವಕಾಲದಲ್ಲಿಯೂ ನಮ್ಮನ್ನು ಜಾಗೃತಗೊಳಿಸುತ್ತವೆ. ಅವರ ಮಾತುಗಳ ನಮ್ಮಲ್ಲಿ  ದೇಶಭಕ್ತಿಯನ್ನು ಹುಟ್ಟಿಸುತ್ತವೆ~ ಎಂದು ಹೇಳಿದರು.
`ಸ್ವಾಮಿ ವಿವೇಕಾನಂದರು 1982ರಲ್ಲಿ ಮೈಸೂರಿಗೆ ಬಂದಿದ್ದರು. ಮೂರು ವಾರಗಳ ಕಾಲ ಇಲ್ಲಿದ್ದರು.

ಮೊದಲ ಎಂಟು ದಿವಸ ಅವರು  ಮಠದಲ್ಲಿ ಮತ್ತು ನಂತರ ದಿವಾನ್ ಶೇಷಾದ್ರಿಯವರ ಆತಿಥ್ಯ ಪಡೆದಿದ್ದರು~ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.