ADVERTISEMENT

ಹೋರಾಟಗಾರರನ್ನು ಬೆಂಬಲಿಸಿ; ಕಳ್ಳರನ್ನಲ್ಲ- ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:20 IST
Last Updated 6 ಫೆಬ್ರುವರಿ 2012, 6:20 IST

ಕೆ.ಆರ್.ನಗರ: ಹೋರಾಟದ ಮೂಲಕ ಮೇಲೆದ್ದು ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ನಾಡಿನ ಬಗ್ಗೆ ಕಳಕಳಿ ಇದೆ. ಅವರದು ತಾಯಿ ಗುಣ. ನಾಯಕರು ಅಂಥವರನ್ನು ಬೆಂಬಲಿಸಬೇಕೆ ಹೊರತು ರಾಜ್ಯವನ್ನು ಲೂಟಿ ಹೊಡೆದವರನಲ್ಲ ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಅಭಿಮಾನ ವ್ಯಕ್ತಪಡಿಸಿದರು.

ಪಟ್ಟಣದ ರೇಡಿಯೊ ಮೈದಾನದಲ್ಲಿ ಭಾನುವಾರ ನಡೆದ ತಾಲ್ಲೂಕು ವೀರಶೈವ ಹಿತರಕ್ಷಣಾ ವೇದಿಕೆ  ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೆಡ್ಡಿ ಸಹೋದರರು 2001ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆಗೆ ಬಾಡಿಗೆ ಕಾರಿನಲ್ಲಿ ಬರುತ್ತಿದ್ದರು. ಅಂಥ ಸ್ಥಿತಿಯಲ್ಲಿದ್ದವರು ರಾಜ್ಯವನ್ನು ದೋಚಿ ಇಂದು ಬೇಳೆದಿದ್ದಾರೆ. ರಾಜ್ಯದ ಸಂಪತ್ತನ್ನು ದೋಚಲೆಂದೇ ಅವರು ರಾಜಕೀಯಕ್ಕೆ ಬಂದವರು. ಆದರೆ, ಯಡಿಯೂರಪ್ಪ ಹೋರಾಟದ ಮೂಲಕ ರಾಜಕೀಯಕ್ಕೆ ಬಂದವರು. ಆ ಹಾರಾಟಗಾರರನ್ನು ಬೆಂಬಲಿಸಬೇಕೆ ವಿನಹ ರೆಡಿಗಳನ್ನಲ್ಲ ಎಂದರು.

ಸಂವಿಧಾನಾತ್ಮಕವಾಗಿ ಚುನಾಯಿತ ಆದವರನ್ನು ಅಸಂವಿಧಾನಾತ್ಕವಾಗಿ ನಿಯಂತ್ರಣ ಮಾಡುವ ತಂತ್ರಗಾರಿಕೆ ಸರಿಯಲ್ಲ. ಇದು ದೊಡ್ಡ ಅಪಾಯ ಎಂದ ಅವರು, ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುವುದನ್ನು ಬಿಟ್ಟು ಇಂದು ಬೇರೇನು ಮಾಡುತ್ತಿಲ್ಲ. ಇದು ಸರಿಯಲ್ಲ ಎಂದು ಹೇಳುವ ವ್ಯಕ್ತಿ ಯಾವ ಪಕ್ಷದಲ್ಲಿಯೂ ಇಲ್ಲ ಎಂದರು.

ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಪಟ್ಟಣದದಲ್ಲಿ ವೀರಶೈವ ಸಮಾಜದ ಸಮುದಾಯ ಭವನ ನಿರ್ಮಿಸಲು ಮೈಸೂರು ರಸ್ತೆಯಲ್ಲಿ 200*300 ಅಳತೆಯ ನಿವೇಶನ ಒದಗಿಸಲು ಸಿದ್ಧತೆ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಕಿರಿಯ ಸಿದ್ಧಲಿಂಗ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.

ಬೆಟ್ಟದಪುರ ಚನ್ನಬಸವ ದೇಶಿಕೇಂದ್ರ ಶ್ರೀ, ಮಾದಹಳ್ಳಿ ಸಾಂಬಸದಾಶಿವ ಶ್ರೀ, ಗಾವಡಗೆರೆ ನಟರಾಜ ಶ್ರೀ, ವಸತಿ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಮಾಜಿ ಸಚಿವ ಎಸ್. ನಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಶಾಸಕ ಎಚ್.ಸಿ. ಬಸವರಾಜು, ಪುರಸಭೆ ಅಧ್ಯಕ್ಷ ತಮ್ಮನಾಯಕ, ಅಖಿಲ ಭಾರತ ವೀರಶೈವ ಮಹಸಭಾ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ಬಿಜೆಪಿ ಮುಖಂಡರಾದ ದೊಡ್ಡಸ್ವಾಮೇಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಸಿ. ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಕೆ.ಪಿ. ಪ್ರಭುಶಂಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ರವಿಶಂಕರ್, ಮುಖಂಡರಾದ ಮಹೇಂದ್ರ, ವೇದಿಕೆಯ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಕೆ.ಎಂ. ನಾಗರತ್ನಮ್ಮ, ನಟರಾಜ್, ಯತೀಶ್, ಕಾರ್ಯದರ್ಶಿ ಸಣ್ಣಲಿಂಗಪ್ಪ, ಸಾಹಿತಿ ತೇ.ಸಿ. ವಿಶ್ವೇಶ್ವರಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.