ಮಡಿಕೇರಿ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ನೋಡಬೇಕಾದರೆ ಮೈಸೂರು–ಕೊಡಗು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪ್ರತಾಪಸಿಂಹ ಅವರನ್ನು ಗೆಲ್ಲಿಸಬೇಕೆಂದು ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಮಡಿಕೇರಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉದ್ಘೋಷ ಮೊಳಗಿತು.
ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸುವಂತಹ ಚುನಾವಣೆ ಇದಲ್ಲ. ಸ್ಥಳೀಯ ಅಭ್ಯರ್ಥಿ ಯಾರೆಂದು ಮಹತ್ವ ನೀಡುವುದು ಬೇಕಾಗಿಲ್ಲ. ಭಾರತ ಹಿಂದೂಸ್ತಾನವಾಗಿ ಉಳಿಯಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸದಂತೆ ತಡೆ ಹಿಡಿಯುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ವಿಷಯದಲ್ಲಿ ಕೇರಳದ ಕಾಂಗ್ರೆಸ್ ಸರ್ಕಾರ ಹೇಗೆ ಯಶಸ್ವಿ ಪಡೆಯಿತು? ಇಲ್ಲಿನ ಜನರ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎದುರು ಬಿಂಬಿಸುವಲ್ಲಿ ಸಂಸದ ವಿಶ್ವನಾಥ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮುಕ್ತ ಮಾರುಕಟ್ಟೆಗೆ ಕಾಫಿ ತೆರೆದುಕೊಳ್ಳಲು ತಾವೇ ಕಾರಣವೆಂದು ಸಂಸದರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕೊಡಗಿನ ತುಂಬೆಲ್ಲ ಇರುವ ಕಾಫಿ ಬೆಳೆಗಾರರು ಒಗ್ಗಟ್ಟಾಗಿ ಹೋರಾಡಿದ್ದರ ಫಲವಾಗಿ 1995–96ರ ಅವಧಿಯಲ್ಲಿ ಮುಕ್ತ ಮಾರುಕಟ್ಟೆಗೆ ಕಾಫಿ ತೆರೆದುಕೊಂಡಿತು. ಆ ಸಮಯದಲ್ಲಿ ಕಾಫಿ ಏಲ್ಲಿ ಬೆಳೆಯುತ್ತದೆ ಎನ್ನುವುದೇ ಸಂಸದರಿಗೆ ತಿಳಿದಿರಲಿಲ್ಲವೇನೋ? ಎಂದು ಅವರು ವ್ಯಂಗ್ಯವಾಡಿದರು.
ಪತ್ರಕರ್ತರಾಗಿದ್ದ ಪ್ರತಾಪ ಸಿಂಹ ಈಗ ಪ್ರತಾಪ ಸಿಂಹ ‘ಗೌಡ’ ಆಗಿದ್ದಾರೆ. ಜಾತಿ ಹೆಸರಿನ ಜೊತೆ ಗುರುತಿಸಿಕೊಳ್ಳುವ ಅವಶ್ಯಕತೆ ಬಿಜೆಪಿ ನಾಯಕರಿಗೆ ಇಲ್ಲ. ಇಲ್ಲಿ ರಾಷ್ಟ್ರೀಯತೆಯೊಂದೇ ಮುಖ್ಯ. ನಾನೆಂದೂ ಜಾತಿ ಹೆಸರಿನ ಜತೆ ಗುರುತಿಸಿಕೊಳ್ಳಲಿಲ್ಲ. ಅದರಿಂದ ಸಾಕಷ್ಟು ನಷ್ಟ– ನೋವು ಕೂಡ ಅನುಭವಿಸಿದ್ದೇನೆ ಎಂದರು.
ಮೂರ್ಖರಾಗದಿರಿ!
ಏಪ್ರಿಲ್ 1ರಂದು ಮೂರ್ಖರಾದರೆ ಒಂದೆರಡು ದಿನಗಳಲ್ಲಿ ಅದು ಮರೆತು ಹೋಗಬಹುದು. ಆದರೆ, ಏಪ್ರಿಲ್ 17ರಂದು ಮೂರ್ಖರಾದರೆ ಐದು ವರ್ಷಗಳ ಕಾಲ ಪಶ್ಚಾತ್ತಾಪ ಪಡಬೇಕಾಗಿ ಬರಬಹುದು ಎಂದು ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಸಿದರು.
ಈಗಿನ ಸಂಸದರಾಗಿರುವ ಕಾಂಗ್ರೆಸ್ಸಿನ ಎಚ್.ವಿಶ್ವನಾಥ್ ಇದುವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ವಿಶೇಷ ಪ್ಯಾಕೇಜ್ ತರುವಲ್ಲಿ ವಿಫಲರಾಗಿದ್ದಾರೆ. ಕುಶಾಲನಗರ– ಮೈಸೂರು ರೈಲ್ವೆ ತರುವುದಾಗಿ ಹೇಳಿಕೊಂಡೇ ‘ರೈಲು’ ಬಿಟ್ಟರು ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಬಿಜೆಪಿ ವಕ್ತಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡಗಿನ ಮೂಲನಿವಾಸಿಗಳ ಬಗ್ಗೆ ಕೆಲವರು ಹಗುರವಾಗಿ ಮಾತನಾಡಿದ್ದನ್ನು ಪ್ರತಾಪ ಸಿಂಹ ತಮ್ಮ ಬರವಣಿಗೆ ಮೂಲಕ ಖಂಡಿಸಿದ್ದಾರೆ. ಜಿಲ್ಲೆಯ ಸಂಸ್ಕೃತಿ, ವೀರ ಪರಂಪರೆ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದಾರೆ. ಇವರ ಗೆಲುವಿಗಾಗಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಕರೆನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಅಭ್ಯರ್ಥಿಗಿಂತ 28,000 ಮತಗಳು ಹೆಚ್ಚುವರಿ ಲಭಿಸಿದ್ದವು. ಈ ಬಾರಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಜಾ ಕುಶಾಲಪ್ಪ ಮಾತನಾಡಿ, ದೇಶದ ಭದ್ರತೆಗಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ ಎಂದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸುನೀಲ್ ಸುಬ್ರಮಣಿ, ಕೊಡಗು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ದೇವಮ್ಮ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಪಕ್ಷದ ಮುಖಂಡರಾದ ತಳೂರು ಕಿಶೋರ್ಕುಮಾರ್, ಬೆಲ್ಲು ಸೋಮಯ್ಯ, ಕಾಂತಿ ಸತೀಶ್, ರಾಜಾರಾವ್, ನಾಪಂಡ ರವಿ ಕಾಳಪ್ಪ, ಮಹೇಶ್ ಜೈನಿ, ಬಾಲಚಂದ್ರ ಕಳಗಿ, ಇತರರು ಉಪಸ್ಥಿತರಿದ್ದರು.
ಮೋದಿ ಗುಣಗಾನ...
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ನಂತರ ಮಡಿಕೇರಿಯಲ್ಲಿ ಮೊದಲ ಬಾರಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಾಪ ಸಿಂಹ, ತಮ್ಮ ಭಾಷಣದುದ್ದಕ್ಕೂ ಮೋದಿ ಪ್ರಧಾನಿಯಾಗುವುದನ್ನು ಹಾಗೂ ರಾಷ್ಟ್ರೀಯತೆಯನ್ನು ಪ್ರಸ್ತಾಪಿಸಿದರು.
ದೇಶಕ್ಕೆ ಸಮರ್ಥ ನಾಯಕತ್ವ ಬೇಕಾಗಿದ್ದು, ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯವಿದೆ. ನನ್ನನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಪ್ರಧಾನಿ ಹಾದಿಯನ್ನು ಸುಗಮಗೊಳಿಸಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಆರಂಭದಲ್ಲಿ ಕೊಡಗಿನ ಹಾಕಿ ಹಾಗೂ ಸೈನಿಕರನ್ನು ಪ್ರಸ್ತಾಪಿಸಿದ್ದನ್ನು ಬಿಟ್ಟರೆ, ತಮ್ಮ 28 ನಿಮಿಷಗಳ ಅವಧಿಯಲ್ಲಿ ಅವರು ಹೆಚ್ಚು ಪ್ರಸ್ತಾಪಿಸಿದ್ದು ದೇಶದ ರಾಜಕೀಯ ಇತಿಹಾಸ ಹಾಗೂ ಮೋದಿಯವರ ಗುಣಗಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.