ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಈಜುಕೊಳವನ್ನು ಜೂನ್ 29ರಂದು ಉದ್ಘಾಟಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಶುಕ್ರವಾರ ಭೇಟಿ ಪರಿಶೀಲನೆ ನಡೆಸಿದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಕ್ಕಳ ಈಜುಕೊಳ, ಅಭ್ಯಾಸದ ಈಜುಕೊಳ, ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ ಮಾದರಿಯ ಈಜುಕೊಳ, ಆಡಳಿತ ಕಚೇರಿ ಕಟ್ಟಡ, ಟಿಕೆಟ್ ಕೌಂಟರ್, ಪ್ಯೂರಿಫೈ ಪ್ಲಾಂಟ್ ರೂಂ, ಮಹಿಳೆಯರು ಮತ್ತು ಪುರುಷರಿಗೆ ಶೌಚಾಲಯ ಹಾಗೂ ಸ್ನಾನದ ಕೊಠಡಿ, ಓಪನ್ ಶವರ್, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸೌಲಭ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಂದೀಪ್ ಸೌಲಭ್ಯ ಪರಿಶೀಲನೆ ಕೈಗೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ರಂದೀಪ್, ‘ಕಿರುರಂಗಮಂದಿರವೂ ಉದ್ಘಾಟನೆಗೆ ಸಜ್ಜಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಒಪ್ಪಿದರೆ ಅಂದೇ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲಾಗುವುದು’ ಎಂದರು.
ಸಾರ್ವಜನಿಕರಿಗೆ ಹಾಗೂ ಅಥ್ಲೀಟ್ಗಳಗೆ ಈಜುಕೊಳವನ್ನು ಉಪಯೋಗಿಸಲು ಪ್ರತ್ಯೇಕ ವೇಳಾಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಭೆ ಕರೆದು ಸಿದ್ಧಗೊಳಿಸಲಾಗುವುದು. ಈಜು ತರಬೇತುದಾರರು, ರಕ್ಷಣಾ ಸಿಬ್ಬಂದಿ, ಪ್ಯೂರಿಫೈ ಪ್ಲಾಂಟ್ಗೆ ನುರಿತ ತಂತ್ರಜ್ಞರನ್ನು ಟೆಂಡರ್ ಮೂಲಕ ನೇಮಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ, ₹ 5 ಕೋಟಿ ವೆಚ್ಚದ ಟೆನಿಸ್ ಅಕಾಡೆಮಿ, ತಲಾ ₹ 2 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಜಿಮ್ನಾಸ್ಟಿಕ್ ಸೆಂಟರ್, ಮಹಿಳಾ ಕ್ರೀಡಾನಿಲಯಕ್ಕೆ ಹಾಗೂ ವರುಣಾ ಕೆರೆಯಲ್ಲಿ ₹ 5 ಕೋಟಿ ವೆಚ್ಚದ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಗಳಿಗೂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ನಿರ್ಮಿತಿ ಕೇಂದ್ರದ ನಿರ್ದೇಶಕ ಮಂಜುನಾಥ್, ಎಂಜಿನಿಯರುಗಳಾದ ಸತೀಶ್, ಶಿವರಾಮೇಗೌಡ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.