ಹುಣಸೂರು: ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಿದ್ದರೂ ಜನರು ಬಳಸಿರುವುದು ವಿಪರ್ಯಾಸದ ಸಂಗತಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಮ್ಮ ಹೇಳಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಶೌಚಾಲಯ ಬಳಕೆ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಅನುದಾನದಲ್ಲಿ ಸಾರ್ವಜನಿಕರು ಶೌಚಾಲಯ ನಿರ್ಮಿಸಿ ಕೊಂಡಿದ್ದರೂ ಬಯಲಿಗೆ ಹೋಗುವುದು ತಪ್ಪಿಲ್ಲ. ತಾಲ್ಲೂಕು ಬಯಲು ಶೌಚಮುಕ್ತ ಪ್ರಶಂಸೆಗೆ ಬಾಜನವಾಗಿದ್ದರೂ ಬಳಕೆ ಯಾಗದಿದ್ದರೆ ಶೌಚಾಲಯ ನಿರ್ಮಿಸಿ ಪ್ರಯೋಜನವಾದರೂ ಏನು? ಈ ಬಗ್ಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆಯ ಹೊಣೆ ಅಧಿಕಾರಿಗಳ ಹೆಗಲ ಮೇಲಿದೆ ಎಂದರು.
ನೀರಿನ ತೊಟ್ಟಿ: ಹಿಂದಿ ಬಾರಿ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಅವುಗಳು ನಿರ್ವಹಣೆ ಇಲ್ಲದೆ ನೀರು ಕೊಳೆತು ಹುಳು ಕಾಣಿಸುವಂತಾಗಿದೆ. ಸ್ವಚ್ಛತಾ ಕೆಲಸ ಸಾರ್ವಜನಿಕರು ಮಾಡಬೇಕು ಅಥವಾ ಪಂಚಾಯಿತಿ ಮಾಡಬೇಕು ಎಂಬ ಜಿಗ್ಞಾಸೆ ಇದ್ದರೂ ಪಿಡಿಒಗಳು ಜವಾಬ್ದಾರಿ ಹೊತ್ತಲ್ಲಿ ಈ ಬೇಸಿಗೆಯಲ್ಲಿ ಜಾನುವಾರುಗಳಿಗೆ ಸಹಕಾರಿ ಆಗಲಿದೆ ಎಂದರು.
ಇಒ ಕೃಷ್ಣಕುಮಾರ್ ಮಾತನಾಡಿ, ಗ್ರಾಮೀಣ ಶಾಲೆಗಳಲ್ಲಿ ₹ 1.75 ಲಕ್ಷದಲ್ಲಿ ಶೌಚಾಲಯ ನಿರ್ಮಿಸುವ ಅವಕಾಶ ಇದೆ. ಪಿಡಿಒಗಳು ತಲಾ ಎರಡು ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪ್ರತಿ ಗ್ರಾಮ ಪಂಚಾಯಿತಿಗೂ ಉದ್ಯೋಗ ಖಾತ್ರಿಯಲ್ಲಿ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 2 ಸ್ಮಶಾನ ಅಭಿವೃದ್ಧಿಗೆ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧಗೊಳಿಸಬೇಕು. ಇದಕ್ಕೆ 14ನೇ ಹಣಕಾಸು ಯೋಜನೆಯಲ್ಲಿ ಅನುದಾನ ಬಳಸಿಕೊಳ್ಳುವ ಅವಕಾಶವಿದೆ ಎಂದರು. ಉಪಾಧ್ಯಕ್ಷ ಪ್ರೇಮಕುಮಾರ್ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.