ಪಿರಿಯಾಪಟ್ಟಣ: ಇತ್ತೀಚಿನ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶ್ರಮಜೀವಿಯ ರಕ್ತಹೀರುವ ಜಿಗಣೆ ಗಳಂತಾಗಿದ್ದಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿ ರುವ ಮಹದೇಶ್ವರ ಬಡಾವಣೆಯಲ್ಲಿ ದಲಿತ ಸಂಘರ್ಷ ಸಮಿತಿ ಮಂಗಳವಾರ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ಜಯಂತಿ ಹಾಗೂ ಸರ್ವಧರ್ಮಿಯರ ಸಹಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಮತ್ತು ರಾಮಮನೋಹರ ಲೋಹಿಯಾ ಅವರು ಜನತೆ ಮತ್ತು ಜನ ಭಾಷೆಗಳಿಗೆ ಬದ್ಧರಾಗಿದ್ದ ಮಹಾ ಪುರುಷರಾಗಿದ್ದರು. ಅನಿಷ್ಠ ಜಾತಿ ಪದ್ಧತಿ ಗುರುಪರಂಪರೆಯನ್ನೂ ಬಿಡದೆ ಕಾಡುತ್ತಿರುವುದು ಆತಂಕಕಾರಿ ವಿಷಯ. ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದಕರ ಎಂದರು.
ಯುವ ಸಮುದಾಯಕ್ಕೆ ಅಂಬೇಡ್ಕರ್ ಹಾಗೂ ಕುವೆಂಪು ವಿಚಾರಧಾರೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಯಿದ್ದು, ಇಡೀ ವಿಶ್ವವೇ ಒಂದು ಎಂದು ಸಾರಿದ ಕುವೆಂಪು ಜಗತ್ತಿನ ಶ್ರೇಷ್ಠ ಜ್ಞಾನಿಯಾಗಿದ್ದಾರೆ ಎಂದರು.
ರಾವಂದೂರಿನ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ, ಕೊಪ್ಪ ಭಾರತ್ ಮಾತಾ ವಿದ್ಯಾಸಂಸ್ಥೆಯ ಫಾ. ಪಿ.ಜೆ.ಜೋಸ್, ಮಲಾಬಾರ್ ಜಾಮಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್, ಪರಿಸರವಾದಿ ಕೆ.ಎನ್.ಸೋಮಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು.
ಪುರಸಭೆ ಅಧ್ಯಕ್ಷ ವೇಣು ಗೋಪಾಲ್, ಹಿರಿಯ ದಲಿತ ಸಂಘರ್ಷ ಸಮಿತಿ ಮುಖಂಡ ಹರಿಹರ ಆನಂದಸ್ವಾಮಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಅಣ್ಣಯ್ಯ, ಡೀಡ್ ಸಂಸ್ಥೆ ಮುಖ್ಯಸ್ಥ ಡಾ.ಶ್ರೀಕಾಂತ್, ತಾಲ್ಲೂಕು ಒಕ್ಕಲಿಗರ ಹಿತಾರಕ್ಷಣಾ ಸಮಿತಿ ಅಧ್ಯಕ್ಷ ರಾಜೇಗೌಡ, ಮುಖಂಡರಾದ ಡಾ.ಪ್ರಕಾಶ್ ಬಾಬುರಾವ್, ಅಣ್ಣಯ್ಯಶೆಟ್ಟಿ, ಎನ್.ಎಲ್.ಗಿರೀಶ್, ಗೋವೀಂದೇಗೌಡ, ಅಣ್ಣೇಗೌಡ, ಸೀತಾರಾಮ್, ಕೃಷ್ಣಮೂರ್ತಿ, ರಾಮಚಂದ್ರ, ಯಶವಂತ್ ಕುಮಾರ್, ಪಿ.ವೈ.ಮಲ್ಲೇಶ್, ಗ್ರಾಮಸ್ಥರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.