ಮೈಸೂರು: ನಂಜನಗೂಡು ತಾಲ್ಲೂಕಿನ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮುಷಾವರತಿ ಇಜ್ತೆಮಾದಲ್ಲಿ (ಸಮಾವೇಶ) ದೇಶದ ವಿವಿಧ ಭಾಗಗಳಿಂದ ಬಂದಿದ್ದ ಆಗಮಿಸಿರುವ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ.
ಒಟ್ಟು 13 ಮೌಲ್ವಿಗಳ ಅಧ್ಯಕ್ಷತೆಯಲ್ಲಿ ಈ ಸಮಾವೇಶ ನಡೆಯುತ್ತಿದೆ. ಜತೆಗೆ ಬಾಂಗ್ಲಾದೇಶ, ಕೀನ್ಯಾ, ಮಾರಿಷಸ್ ಧಾರ್ಮಿಕ ಮುಖಂಡರು ಭಾಗಿಯಾಗಿದ್ದಾರೆ. ಕಡಕೊಳದ ಬೃಹತ್ ಮೈದಾನದಲ್ಲಿ ಸಮಾವೇಶಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿದ್ದು, ಸಾಗರೋಪಾದಿಯಲ್ಲಿ ಮುಸ್ಲಿಮರು ಬರುತ್ತಿದ್ದಾರೆ.
ಭಾವೈಕ್ಯ ಹಾಗೂ ಧರ್ಮ ಸಹಿಷ್ಣುತೆಯನ್ನು ಸಾರುವುದು ಈ ಸಮಾವೇಶದ ಮೂಲ ಆಶಯವಾಗಿದೆ ಎಂದು ಮೂಲಗಳು ತಿಳಿಸಿವೆ. ಮೌಲ್ವಿಗಳು ಪ್ರಾರ್ಥನೆ ಜತೆಗೆ, ಸರಣಿ ಉಪನ್ಯಾಸ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಿದ್ದಾರೆ. ಪ್ರತಿ ವರ್ಷವೂ ಜಿಲ್ಲಾಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತಿತ್ತು. ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರೊಬ್ಬರು ತಿಳಿಸಿದರು.
ಗುಜರಾತಿನ ಮೌಲ್ವಿಗಳಾದ ಅಹ್ಮದ್ ಹುಸೇನ್, ಇಬ್ರಾಹಿಂ ದೇವೋಸ್, ಲಾಡ್ ಸಾಹೇಬ್, ಉತ್ತರ ಪ್ರದೇಶದ ಖಾಲೀದ್ ಅಹಮದ್, ಅಲೀಗಡದ ಸನಾ ಉಲ್ಲಾ, ಬೆಂಗಳೂರಿನ ಅಬ್ದುಲ್ ರೆಹಮಾನ್, ಫರೂಕ್ ಅಹ್ಮದ್, ಅಕ್ಬರ್ ಷರೀಫ್ ಭಾಗಿಯಾಗಿರುವುದು ವಿಶೇಷ. ಅಖಿಲ ಭಾರತ ಮಿಲ್ಲಿ ಸಮಿತಿಯ ಅಧ್ಯಕ್ಷ ಮೊಹಮದ್ ಜಕಾ ಉಲ್ಲಾ ಸಾಹೇಬ್ ಸಿದ್ದಿಕಿ, ಜಿಲ್ಲಾ ಸಮಿತಿಯ ಅನೇಕ ಮೌಲ್ವಿಗಳು ಪಾಲ್ಗೊಂಡಿದ್ದಾರೆ.
ರಾಜಕೀಯದಿಂದ ದೂರ: ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳನ್ನು ಸಮಾವೇಶಕ್ಕೆ ಆಹ್ವಾನಿಸಿಲ್ಲ. ಸಂಪೂರ್ಣವಾಗಿ ಖುರಾನ್ ಆಧಾರಿತ ಧಾರ್ಮಿಕ ಉಪನ್ಯಾಸಗಳು ನಡೆಯತ್ತಿವೆ. ಹೊರ ಭಾಗಗಳಿಂದ ಬಂದವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ನಗರದ ಟೋಲ್ ಗೇಟ್ ಹಾಗೂ ರೈಲು ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಶುಕ್ರವಾರ ಸಮಾವೇಶ ಆರಂಭವಾಗಿದ್ದು, ಭಾನುವಾರ ಮುಗಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.