ನಂಜನಗೂಡು: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮುಂಭಾಗ ಉದ್ಯೋಗಕ್ಕಾಗಿ ಯುವ ಜನರು ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರ ಹಗುರ ಹೇಳಿಕೆ ಖಂಡಿಸಿ ಗುರುವಾರ ಪಕೋಡ ತಯಾರಿಸಿ ಮಾರಾಟ ಮಾಡುವ ಮೂಲಕ ಚಳವಳಿ ನಡೆಸಿದರು.
ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ಎಂ.ವಿಜಯ ಕುಮಾರ್, ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಈ ವಿಚಾರದಲ್ಲಿ ಹಗುರ ಹೇಳಿಕೆ ನೀಡಿದ್ದಾರೆ. ವಿದ್ಯಾವಂತ ಯುವಕರು ಪಕೋಡಾ ವ್ಯಾಪಾರದಲ್ಲಿ ತೊಡಗುವ ಮೂಲಕ ಉದ್ಯೋಗ ಕಂಡುಕೊಳ್ಳಬಹುದು ಎಂದು ಅಪಹಾಸ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ವಿದ್ಯಾರ್ಥಿನಿಯರು ತಾವು ತಯಾರಿಸಿದ ಪಕೋಡಗಳಿಗೆ ಡಾಕ್ಟರ್ ಹಾಗೂ ಎಂಜಿನಿಯರ್ ಪಕೋಡ ಎಂದು ಹೆಸರಿಟ್ಟು ಮಾರುವ ಮೂಲಕ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ವ್ಯಂಗ್ಯವಾಡಿದರು.
ಉದ್ಯೋಗಕ್ಕಾಗಿ ಯುವಜನರು ಸಂಸ್ಥೆ ರಾಜ್ಯ ಸಂಚಾಲಕ ಮಂಡ್ಯ ಸೋಮಶೇಖರ್, ಕುಮಾರ್, ಬದನವಾಳು ಸರ್ವೇಶ್, ಸೋಮು, ದಸಂಸ ಮುಖಂಡರಾದ ಮಲ್ಲಹಳ್ಳಿ ನಾರಾಯಣ, ಮಲ್ಲೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.