ಮೈಸೂರು: ಕಾಮಗಾರಿ ಹಣ ಬಾಕಿ ಪಾವತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಿರಿಯ ಎಂಜಿನಿಯರ್ ಆಗಿದ್ದ ಮನೋಹರ್ ಎಂಬಾತನಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು 6 ವರ್ಷ ಜೈಲು ಹಾಗೂ ₹ 1.35 ಲಕ್ಷ ದಂಡ ವಿಧಿಸಿದೆ.
ಕೆ.ಆರ್.ನಗರದ ಪ್ರಥಮದರ್ಜೆ ಗುತ್ತಿಗೆದಾರ ಎಚ್.ಎಸ್.ಜಗದೀಶ್ ಅವರು ₹ 8 ಲಕ್ಷ ವೆಚ್ಚದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದರು. ಅರ್ಧ ಕಾಮಗಾರಿ ಮುಗಿದ ಬಳಿಕ ₹ 4.28 ಲಕ್ಷ ಪಡೆದಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ₹ 3.99 ಲಕ್ಷ ಬಿಡುಗಡೆ ಮಾಡಲು 2015ರ ಮಾರ್ಚ್ ತಿಂಗಳಿನಲ್ಲಿಮನೋಹರ್ ₹ 1.5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ. ಈ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಂಡ ಜಗದೀಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ₹ 1 ಲಕ್ಷ ಲಂಚ ನೀಡುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನೋಹರ್ನನ್ನು ಬಂಧಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಭರತ್ಕುಮಾರ್ ಅವರು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.