ಮೈಸೂರು: ಪಾಲಿಕೆಯ ವಲಯ ಕಚೇರಿ 4ರ ಕಿರಿಯ ಎಂಜಿನಿಯರ್ ಗುರುಸಿದ್ಧಯ್ಯ ಹೊಸ ಕಟ್ಟಡ ನಿರ್ಮಿಸುವ ಸಂಬಂಧ ಯೋಜನೆ ಮಂಜೂರಾತಿಗಾಗಿ ಮಹಿಳೆಯೊಬ್ಬರಿಂದ ₹ 3 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು (ಎಸಿಬಿ) ಮಂಗಳವಾರ ಬಂಧಿಸಿದ್ದಾರೆ.
‘ಮಹಿಳೆಯು ಹೊಸ ಕಟ್ಟಡ ನಿರ್ಮಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಯೋಜನೆ ಮಂಜೂರಾತಿ ಕುರಿತು ವಿಚಾರಿಸಿದಾಗ ಗುರುಸಿದ್ಧಯ್ಯ ₹ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ₹ 3 ಸಾವಿರವನ್ನು ಮುಂಗಡ ಪಡೆದಿದ್ದರು. ಉಳಿದ ₹ 3 ಸಾವಿರ ಲಂಚದ ಹಣವನ್ನು ಗುರುಸಿದ್ಧಯ್ಯ ತಮ್ಮ ಕಚೇರಿಯಲ್ಲಿ ಪಡೆಯುವಾಗ ದಾಳಿ ನಡೆಸಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪಣ್ಣಗೆ ನೋಟಿಸ್ ನೀಡಲು ಸಿದ್ಧತೆ
ಮೈಸೂರು: ‘ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷ ಅಪ್ಪಣ್ಣ ಮತ್ತು ಸ್ವರಾಜ್ ಗ್ರೂಪ್ ಕಂಪನಿಯ ಮಾಲೀಕ ಪ್ರವೀಣ್ ಎಂಬುವವರ ವಿರುದ್ಧ ವಂಚನೆ ಆರೋಪ ಮಾಡಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪಣ್ಣ ಅವರನ್ನು ತನಿಖೆಗೆ ಒಳಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕುರಿತು ಅವರಿಗೆ ನೋಟಿಸ್ ನೀಡಲಾಗುವುದು. ಸದ್ಯ, ಪ್ರಕರಣದ ಮತ್ತೊಬ್ಬ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷೆನ್ಸ್ ನ್ಯಾಯಾಲಯ ತಿರಸ್ಕರಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.