ADVERTISEMENT

ಮಡಿವಾಳರನ್ನು ಎಸ್‌ಸಿಗೆ ಸೇರಿಸಿ: ಎಚ್‌.ವಿಶ್ವನಾಥ್‌

ಮುಖ್ಯಮಂತ್ರಿ ಆಗ್ರಹಿಸಿದ ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 3:34 IST
Last Updated 21 ನವೆಂಬರ್ 2020, 3:34 IST
ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸೇವಾ ಸಂಘದ ನಾಮಫಲಕವನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಶುಕ್ರವಾರ ಅನಾವರಣಗೊಳಿಸಿದರು. ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಕಾಂಗ್ರೆಸ್ ಮುಖಂಡ ಧ್ರುವನಾರಾಯಣ, ಕರ್ನಾಟಕ ವಸ್ತು ಪ್ರದರ್ಶ‌ನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ರಘು ಇದ್ದಾರೆ
ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸೇವಾ ಸಂಘದ ನಾಮಫಲಕವನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಶುಕ್ರವಾರ ಅನಾವರಣಗೊಳಿಸಿದರು. ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಕಾಂಗ್ರೆಸ್ ಮುಖಂಡ ಧ್ರುವನಾರಾಯಣ, ಕರ್ನಾಟಕ ವಸ್ತು ಪ್ರದರ್ಶ‌ನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ರಘು ಇದ್ದಾರೆ   

ಮೈಸೂರು: ‘ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಇಲ್ಲಿ ಆಗ್ರಹಿಸಿದರು.

ನಗರದ ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜದಲ್ಲಿ ಸ್ಥಾನಮಾನ, ಅವಕಾಶ, ಪ್ರಾತಿನಿಧ್ಯ, ಪ್ರಾಬಲ್ಯ ಇರುವವರೇ ಮೀಸಲಾತಿ ಕೇಳುವಾಗ, ಮಡಿವಾಳರು ಕೇಳುವುದರಲ್ಲಿ ತಪ್ಪೇನಿದೆ?’ ಎಂದರು.

‘ಡಿ.ದೇವರಾಜ ಅರಸು ಕಾಲದಲ್ಲಿ ಸ್ವತಃ ಅವರೇ, ‘ಸಂಘ–ಸಂಸ್ಥೆಗಳನ್ನು ಮಾಡಿಕೊಂಡು ಮನವಿ ನೀಡಿ’ ಎಂದು ಸಣ್ಣ ಸಮುದಾಯದವರಿಗೆ ಹೇಳುತ್ತಿದ್ದರು. ಬಿಹಾರದಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಮೀಸಲಾತಿ ನೀಡಲಾಗಿದೆ. ಮೀಸಲಾತಿಯ ಸೌಲಭ್ಯಗಳಿಗಾಗಿ ನಮ್ಮ ನಡುವಿನ ಅಸಮಾಧಾನಗಳನ್ನು ಮರೆತು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು’ ಎಂದು ವಿಶ್ವನಾಥ್‌ ಹೇಳಿದರು.

ADVERTISEMENT

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಮಾಜಿ ಸಂಸದ ಆರ್.ಧ್ರುವನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡ ಆರ್.ರಘು, ಕೆಪಿಸಿಸಿ ಸದಸ್ಯ ಪಿ.ರಾಜು, ಎಚ್.ಸಿ.ಲಕ್ಷ್ಮಣ್ ಮತ್ತಿತರರು ಸಮಾರಂಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.