ನಂಜನಗೂಡು: ಕಳೆದ ವರ್ಷ ಭಾರತೀಯ ಸೇನೆಯ ಅಗ್ನಿ ವೀರ್ಗೆ ಆಯ್ಕೆಯಾಗಿ, ಸೇನಾ ತರಬೇತಿ ಮುಗಿಸಿ ನಗರಕ್ಕೆ ಶುಕ್ರವಾರ ಆಗಮಿಸಿದ ನಗರದ ಚಾಮಲಾಪುರ ಬೀದಿ ಬಡಾವಣೆಯ ಇರ್ಫಾನ್ ಅಬ್ದುಲ್ಗೆ ಅವರ ಗೆಳೆಯರು ಅದ್ದೂರಿ ಸ್ವಾಗತ ನೀಡಿದರು.
ನಗರದ ದೇವರಾಜ ಅರಸ್ ಸೇತುವೆ ಬಳಿ ಹಾರ, ತುರಾಯಿ ಹಾಕಿ ಸ್ವಾಗತಿಸಿದ ಯುವಕರ ತಂಡ, ನಂತರ ತ್ರಿವರ್ಣ ಧ್ವಜ ಹಿಡಿದು, ಭಾರತ್ ಮಾತಾಕೀ ಜೈ ಘೋಷಣೆ ಕೂಗಿದರು. ತೆರೆದ ಜೀಪ್ನಲ್ಲಿ ರಾಷ್ಟ್ರಪತಿ ರಸ್ತೆ ಮೂಲಕ ಮೆರವಣಿಗೆ ನಡೆಸಿ, ಶ್ರೀಕಂಠೇಶ್ವರ ದೇವಾಲಯಕ್ಕೆ ಕೆರೆದೊಯ್ದು ಸಂಭ್ರಮಿಸಿದರು.
ಸೇನೆಯ ಸಮ ವಸ್ತ್ರ ಧರಿಸುವುದು ನನ್ನ ಕನಸಾಗಿತ್ತು. ತಂದೆ– ತಾಯಿ ಹಾಗೂ ಗೆಳೆಯರ ಸಹಕಾರದಿಂದ ಕನಸು ಸಾಕಾರಗೊಂಡಿದೆ. ಮೊದಲಿಗೆ ಜಮ್ಮು ಕಾಶ್ಮೀರಕ್ಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದು ಸಂತೋಷವಾಗಿದೆ ಎಂದು ಇರ್ಫಾನ್ ಅಬ್ದುಲ್ಲಾ ಹೇಳಿದರು.
ನಗರದಲ್ಲಿ ಅಗ್ನಿ ವೀರ್ಗೆ ಸೇರುವವರಿಗೆ ತರಬೇತಿ ನೀಡುವ ಸೂರಿ ಮಾತನಾಡಿ, ದೈಹಿಕ ಪರೀಕ್ಷೆಗೆ ಅನುಕೂಲವಾಗುವಂತೆ ನಗರದ ಹತ್ತಾರು ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದೇನೆ. ಈಗ ನಮ್ಮ ತಂಡದ ಒಬ್ಬ ಯುವಕ ಸೇನೆಗೆ ಆಯ್ಕೆಯಾಗಿದ್ದಾನೆ. ಮುಂದಿನ ತಿಂಗಳಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ನಂಜನಗೂಡಿನ ಮತ್ತಷ್ಟು ಯುವಕರು ಅಗ್ನಿವೀರರಾಗುವ ಭರವಸೆ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.