ADVERTISEMENT

ಮೈಸೂರು: 23ಕ್ಕೆ ಆಕಾಶವಾಣಿ ಸಂಗೀತ ಸಮ್ಮೇಳನ

ಶಿವಶಂಕರಸ್ವಾಮಿ ‘ಮೃದಂಗ ತರಂಗ’, ಸಹನಾ ವೀಣಾ ವಾದನ ಅನುರಣನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:02 IST
Last Updated 21 ನವೆಂಬರ್ 2025, 6:02 IST
ಎಚ್‌.ಎಲ್‌.ಶಿವಶಂಕರಸ್ವಾಮಿ
ಎಚ್‌.ಎಲ್‌.ಶಿವಶಂಕರಸ್ವಾಮಿ   

ಮೈಸೂರು: ಆಕಾಶವಾಣಿ ಮೈಸೂರು ಕೇಂದ್ರದ 91ನೇ ವರ್ಷಾಚರಣೆ ಪ್ರಯುಕ್ತ ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ನ.23ರಂದು ‘67ನೇ ಆಕಾಶವಾಣಿ ಸಂಗೀತ ಸಮ್ಮೇಳನ’ ನಡೆಯಲಿದ್ದು, ವಿದ್ವಾನ್ ಎಚ್‌.ಎಲ್‌.ಶಿವಶಂಕರಸ್ವಾಮಿ ಅವರ ‘ಮೃದಂಗ ತರಂಗ’, ಸಹನಾ ಅವರ ವೀಣಾ ವಾದನ ಅನುರಣಿಸಲಿದೆ. 

‘ಪ್ರಸಾರ ಭಾರತಿ ಸಹಯೋಗದಲ್ಲಿ ನಡೆಯುವ ಸಮ್ಮೇಳನವನ್ನು 23ರ ಭಾನುವಾರ ಸಂಜೆ 6ಕ್ಕೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಉದ್ಘಾಟಿಸುವರು. ಎಲ್ಲ ಕೇಳುಗರು, ಸಂಗೀತ ಪ್ರೇಮಿಗಳಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪಾಸ್‌, ಟಿಕೆಟ್‌ ಇಲ್ಲ’ ಎಂದು ಕೇಂದ್ರದ ಮುಖ್ಯಸ್ಥ ಮಂಜುನಾಥ ಎನ್.ಬೇದ್ರೆ, ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಕೇಂದ್ರ ಸಂಸ್ಕೃತಿ ಸಚಿವಾಲಯವು ಪ್ರಸಾರ ಭಾರತಿ ಹಾಗೂ ಆಕಾಶವಾಣಿ ಮೂಲಕ ಭಾರತೀಯ ಕಲೆ ಮತ್ತು ಸಂಸ್ಕೃತಿ ಬೆಳೆಸುತ್ತಿದೆ. ಅಂದು ನಡೆಯುವ ಕಾರ್ಯಕ್ರಮದ ದಾಖಲೀಕರಣವೂ ಆಗಲಿದ್ದು, ಇದೇ ಮೊದಲ ಬಾರಿ ಆಕಾಶವಾಣಿ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಾರವಾಗಲಿರುವುದು ವಿಶೇಷವಾಗಿದೆ’ ಎಂದರು. 

ADVERTISEMENT

‘ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಕಾರಗಳು ಬೆಳೆಯಲು ಆಕಾಶವಾಣಿ ನೆರವಾಗಿದೆ. ಅಂತೆಯೇ ಸ್ಥಳೀಯ ಜಾನಪದ ಕಲಾ ಪ್ರಕಾರಗಳು ಹಾಗೂ ಸುಗಮ ಸಂಗೀತಕ್ಕೂ ಸಮಾನ ಆದ್ಯತೆ ನೀಡಿದೆ.  ಕೇಳುಗರೊಂದಿಗೆ ಉತ್ತಮ ಸಂಬಂಧ ಹಾಗೂ ಸಂವಾದವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ’ ಎಂದು ಹೇಳಿದರು. 

ಪ್ರತಿಭೆಗಳಿಗೆ ಪ್ರೋತ್ಸಾಹ: ‘ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಜನಪ್ರಿಯಗೊಳಿಸುವುದು ಸಮ್ಮೇಳನದ ಉದ್ದೇಶವಾಗಿದ್ದು, ಉದಯೋನ್ಮುಖ ಪ್ರತಿಭೆಗಳಿಗೂ ವೇದಿಕೆ ನೀಡಿದೆ. ಸಮ್ಮೇಳನದ ಕಾರ್ಯಕ್ರಮಗಳು ರಾಷ್ಟ್ರಮಟ್ಟದಲ್ಲಿ ಜನವರಿಯಲ್ಲಿ ಪ್ರಸಾರಗೊಳ್ಳಲಿವೆ. ವಿಶ್ವದಾದ್ಯಂತ ಕಾರ್ಯಕ್ರಮ ತಲುಪಲಿದೆ’ ಎಂದು ಮಂಜುನಾಥ ತಿಳಿಸಿದರು. 

‘ಮೊಬೈಲ್‌ ಆ್ಯಪ್‌ ಕೂಡ ಇದ್ದು, ಎಲ್ಲಿಂದಲೂ ಆಲಿಸುವ ಅವಕಾಶ ಈಗಿದೆ. ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು, ಶೋತೃಗಳು ಹೆಚ್ಚುತ್ತಿದ್ದಾರೆ’ ಎಂದರು.  

ಕಾರ್ಯಕ್ರಮ ನಿರ್ವಾಹಕ ಎನ್‌.ಕೇಶವ ಮೂರ್ತಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಪಿ.ಆನಂದನ್‌ ಪಾಲ್ಗೊಂಡಿದ್ದರು. 

ಎಸ್‌.ವಿ.ಸಹನಾ

ಮೃದಂಗ– ವೀಣೆಯ ಮೋಡಿ!  ವಿದ್ವಾನ್ ಎಚ್‌.ಎಲ್‌.ಶಿವಶಂಕರ ಸ್ವಾಮಿ ಅವರ ‘ಮೃದಂಗ ತರಂಗ’ ಕಾರ್ಯಕ್ರಮ ನೀಡುತ್ತಿದ್ದು ಸಪ್ತಸ್ವರಗಳು ಮೃದಂಗದಿಂದಲೇ ಹೊಮ್ಮುವುದು ವಿಶೇಷ. ಇದರೊಂದಿಗೆ ಫ್ಯೂಷನ್‌ ಜುಗಲ್‌ಬಂದಿ ಇರಲಿದ್ದು ವೈವಿಧ್ಯಮಯ ಲಯ ಲಹರಿ ಹರಿಯಲಿದೆ.  ಸಮೀರ್‌ ರಾವ್‌ –ಕೊಳಲು ಜೋತ್ಸ್ಯಾ ಶ್ರೀಕಾಂತ್– ವಯಲಿನ್ ಸಂಗೀತ್‌ ಥಾಮಸ್‌– ಕೀ ಬೋರ್ಡ್ ಆದರ್ಶ್‌ ಶೆಣೈ– ತಬಲಾ ಹಾಗೂ ಅನುಷ್‌ ಶೆಟ್ಟಿ– ತಾಳ ವಾದ್ಯದಲ್ಲಿ ಸಾಥ್‌ ನೀಡಲಿದ್ದಾರೆ.  ನಂತರ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ‘ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ ಪಡೆದಿರುವ ವಿದುಷಿ ಎಸ್‌.ವಿ.ಸಹನಾ ಅವರ ವೀಣಾ ವಾದನ ಇರಲಿದ್ದು ಮೃದಂಗದಲ್ಲಿ ಅರ್ಜುನ್ ಕುಮಾರ್ ಘಟಂನಲ್ಲಿ ಜಿ.ಎಸ್‌.ರಾಮಾನುಜನ್ ಸಾಥ್‌ ನೀಡುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.