ADVERTISEMENT

ಜೀವ ವೈವಿಧ್ಯ ಹಬ್ಬ ನಾಳೆ

ಎಚ್.ಡಿ.ಕೋಟೆಯ ಅಂತರಸಂತೆಯಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 10:00 IST
Last Updated 1 ಜನವರಿ 2020, 10:00 IST
ಸಿರಿಧಾನ್ಯ (ಸಾಂದರ್ಭಿಕ ಚಿತ್ರ)
ಸಿರಿಧಾನ್ಯ (ಸಾಂದರ್ಭಿಕ ಚಿತ್ರ)   

ಮೈಸೂರು: ಪೀಪಲ್ ಟ್ರೀ ಸಂಸ್ಥೆ, ಸಿರಿಧಾನ್ಯ ಸೋದರಿಯರ ಗುಂಪುಗಳು ಮತ್ತು ರೈತ ಗುಂಪುಗಳ ವತಿಯಿಂದ ಜ. 3ರಂದು ಬೆಳಿಗ್ಗೆ 10 ಗಂಟೆಗೆ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಮಹದೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ‘ಜೀವ ವೈವಿಧ್ಯ ಹಬ್ಬ ಮತ್ತು ಮಳೆ ಆಶ್ರಿತ ಕೃಷಿ ರೈತರ ಸಂಗಮ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಇಲ್ಲಿ ಬಿತ್ತನೆಬೀಜಗಳ ವಸ್ತು ಪ್ರದರ್ಶನ, ಜೀವಾಮೃತ ತಯಾರಿಕೆ, ಬೀಜೋಪಚಾರ, ಬೀಜ ಶೇಖರಣೆ, ಸಸ್ಯಸಾರ ತಯಾರಿಕೆ, ಕೊಟ್ಟಿಗೆ ಗೊಬ್ಬರ ಮೌಲ್ಯವರ್ಧನೆ, ಸಾವಯವ ಯೂರಿಯ ತಯಾರಿಕೆ ಪ್ರಯೋಗಗಳು ಇರುತ್ತವೆ ಎಂದು ಪೀಪಲ್ ಟ್ರೀ ಸಂಸ್ಥೆಯ ಕೃಷಿ ಸಂಶೋಧನಾ ಸಂಯೋಜಕ ಎಲ್.ಸಿ.ಚನ್ನರಾಜು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿ ಸಾವಯವ ಮತ್ತು ಸಿರಿಧಾನ್ಯಗಳಿಗೆ ಸಂಬಂಧಿಸಿದಂತೆ ಸಂವಾದ ಇರಲಿದೆ. ಸಿರಿಧಾನ್ಯ ಬೆಳೆ ಬೆಳೆಯುವ ಮಹಿಳೆಯರನ್ನು ಪ್ರೋತ್ಸಾಹಿಸುವುದು ಇದರ ಪ್ರಧಾನ ಉದ್ದೇಶ ಎಂದು ಅವರು ಹೇಳಿದರು.

ADVERTISEMENT

ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅಂತರಬೆಳೆಯಾಗಿ ಸಿರಿಧಾನ್ಯಗಳನ್ನು ಬೆಳೆಯಬೇಕು. ಕೇವಲ ಒಂದೇ ಬೆಳೆ ಬೆಳೆದರೆ ಅದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಿಲ್ಲ. ಸಿರಿಧಾನ್ಯಗಳ ಕುರಿತು ಅತಿಯಾದ ವೈಭವೀಕರಣ ಬೇಡ. ಸಿರಿಧಾನ್ಯಗಳಿಗೂ ಇತಿಮಿತಿಗಳಿವೆ ಎಂಬುದನ್ನು ಮರೆಯಬಾರದು. ಸಿರಿಧಾನ್ಯಗಳನ್ನು ಸೇವಿಸಿದರೆ ಅಪೌಷ್ಟಿಕತೆ ನೀಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಕಾರ್ಯಕ್ರಮದ ಸಂಯೋಜಕಿ ಗೌರಮ್ಮ ಮಾತನಾಡಿ, ‘ಸಂಸ್ಥೆ ವತಿಯಿಂದ 8 ಹಳ್ಳಿಗಳಲ್ಲಿ 284 ಹೆಕ್ಟೇರ್ ಪ್ರದೇಶಗಳಲ್ಲಿ ಸಿರಿಧಾನ್ಯ ಬೆಳೆಯಲಾಗಿದೆ. ಅಂತರ ಬೆಳೆಯಾಗಿ ಬೆಳೆದಿರುವುದರಿಂದ ಇದು ರೈತರ ಕುಟುಂಬಗಳ ಅಗತ್ಯಕ್ಕೆ ಸಾಕಾಗುವಷ್ಟಿದೆ. ರೈತರ ಕುಟುಂಬಗಳ ಪೌಷ್ಟಿಕಾಂಶ ಹೆಚ್ಚಿಸುವುದು ಇದರ ಗುರಿ’ ಎಂದು ಅವರು ತಿಳಿಸಿದರು.

ಸಿರಿಧಾನ್ಯ ಕೃಷಿಕರಾದ ಸವಿತಾ, ಮಹದೇವಮ್ಮ, ಹೊಸಮಾಳದ ಸವಿತಾ, ನೂರಳಕುಪ್ಪೆಯ ಜಯಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.