ADVERTISEMENT

ಬೂತ್‌ ಏಜೆಂಟ್‌ ನೇಮಕ: ಆರ್‌.ಧರ್ಮಸೇನ

ಕಾಂಗ್ರೆಸ್‌ನ ಕೊರೊನಾ ವಾರಿಯರ್ಸ್‌ಗಳಿಗೆ ₹ 1 ಲಕ್ಷ ಮೊತ್ತದ ವಿಮಾ ಬಾಂಡ್‌: ಡಾ.ಬಿಜೆವಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:07 IST
Last Updated 22 ಅಕ್ಟೋಬರ್ 2020, 14:07 IST

ಮೈಸೂರು: ‘ಪ್ರತಿ ಬೂತ್‌ಗೂ ಏಜೆಂಟರನ್ನು ಅಧಿಕೃತವಾಗಿ ನೇಮಿಸಬೇಕು ಎಂದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಮೈಸೂರು–ಚಾಮರಾಜನಗರ ಜಿಲ್ಲೆಯಲ್ಲಿನ ನೇಮಕಾತಿಯ ಜವಾಬ್ದಾರಿಯನ್ನು ಕಾಂಗ್ರೆಸ್‌ ನನಗೆ ವಹಿಸಿದೆ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಗುರುವಾರ ಇಲ್ಲಿ ತಿಳಿಸಿದರು.

‘ಎರಡೂ ಜಿಲ್ಲೆಗಳಲ್ಲಿ 3901 ಬೂತ್‌ಗಳಿದ್ದು, ಆಯಾ ಜಿಲ್ಲೆಯಲ್ಲಿ ಸಭೆ ನಡೆಸಿ ಪಕ್ಷದ ಕಾರ್ಯಕರ್ತರನ್ನು ಏಜೆಂಟರನ್ನಾಗಿ ಅಧಿಕೃತವಾಗಿ ನೇಮಿಸಲಾಗುವುದು’ ಎಂದು ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮತದಾನದ ಸಂದರ್ಭ ಏಜೆಂಟರ ದಿಢೀರ್ ಬದಲಾವಣೆ, ಖರೀದಿ... ಸೇರಿದಂತೆ ಹಲವು ಅಕ್ರಮ ನಡೆಯುವ ಬಗ್ಗೆ ಚುನಾವಣಾ ಆಯೋಗಕ್ಕೆ ಹಲವರು ದೂರು ನೀಡಿದ್ದರು. ಹೀಗಾಗಿ ಆಯೋಗ ಬೂತ್ ಮಟ್ಟದಲ್ಲಿ ಪಕ್ಷದ ಏಜೆಂಟ್ ಹಾಗೂ ಸರ್ಕಾರಿ ಅಧಿಕಾರಿಯೊಬ್ಬರನ್ನು ಏಜೆಂಟ್ ಆಗಿ ನೇಮಿಸಲು ಸೂಚಿಸಿದೆ’ ಎಂದು ತಿಳಿಸಿದರು.

ADVERTISEMENT

‘ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಸಭೆಗಳನ್ನು ನಡೆಸಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಪಕ್ಷದ ಅಧಿಕೃತ ಏಜೆಂಟರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಏಜೆಂಟರಾಗಿ ನೇಮಕವಾದವರು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ’ ಎಂದು ಹೇಳಿದರು.

ಕೊರೊನಾ ಕವಚ: ‘ಪಕ್ಷದ ಆರೋಗ್ಯ ಹಸ್ತ ಕಾರ್ಯಕ್ರಮದಡಿ ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರಿಗೆ ಸೋಂಕು ತಗುಲಿದರೆ ಚಿಕಿತ್ಸೆಗಾಗಿ ಆರ್ಥಿಕ ನೆರವು ಒದಗಿಸಲು ‘ಕೊರೊನಾ ಕವಚ’ ವಿಮಾ ಯೋಜನೆಯನ್ನು ಕಾಂಗ್ರೆಸ್‌ ಜಾರಿಗೊಳಿಸಿದೆ’ ಎಂದು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ತಿಳಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ 100 ಕಾರ್ಯಕರ್ತರು ಕೊರೊನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಎಲ್ಲರಿಗೂ ₹ 1 ಲಕ್ಷ ಮೊತ್ತದ ವಿಮಾ ಬಾಂಡ್‌ ಒದಗಿಸಲಾಗಿದೆ’ ಎಂದು ಹೇಳಿದರು.

ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಮೂರ್ತಿ, ಹೆಡತಲೆ ಮಂಜುನಾಥ್, ನಗರ ವಕ್ತಾರ ಮಹೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.