ADVERTISEMENT

ನಂಜನಗೂಡು | ಆರೋಪಿ ಬಂಧನ: 19 ಬೈಕ್‌ಗಳ ವಶ

ನಂಜನಗೂಡು: ದಾಸೋಹ ಭವನ ಮುಂಭಾಗ ಪಾರ್ಕಿಂಗ್‌ ಸ್ಥಳದಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 15:29 IST
Last Updated 11 ಜೂನ್ 2024, 15:29 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದ ಮುಂಭಾಗ ಬೈಕ್‌ಗಳನ್ನು ಕದಿಯುತಿದ್ದ ಕಳ್ಳನನ್ನು ಬಂಧಿಸಿರುವ ನಗರ ಪೊಲೀಸರು, ಆತನಿಂದ ₹15 ಲಕ್ಷ ಮೌಲ್ಯದ 19 ಬೈಕ್‌ಗಳನ್ನು ವಶಪಡಿಸಿಕೊಂಡರು
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದ ಮುಂಭಾಗ ಬೈಕ್‌ಗಳನ್ನು ಕದಿಯುತಿದ್ದ ಕಳ್ಳನನ್ನು ಬಂಧಿಸಿರುವ ನಗರ ಪೊಲೀಸರು, ಆತನಿಂದ ₹15 ಲಕ್ಷ ಮೌಲ್ಯದ 19 ಬೈಕ್‌ಗಳನ್ನು ವಶಪಡಿಸಿಕೊಂಡರು   

ನಂಜನಗೂಡು: ನಗರದ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದ ಮುಂಭಾಗದಲ್ಲಿ ಬೈಕ್‍ಗಳನ್ನು ಕದಿಯುತಿದ್ದ ಕಳ್ಳನನ್ನು ನಗರ ಪೊಲೀಸರು ಬಂಧಿಸಿದ್ದು, ಸುಮಾರು ₹15 ಲಕ್ಷ ಮೌಲ್ಯದ 19 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಕರಿನಂಜನಪುರದ ಶಂಕರಪ್ಪ (56) ಬಂಧಿತ ಆರೋಪಿ.

ದಾಸೋಹ ಭವನದ ಮುಂಭಾಗ ಬೈಕ್‌ ನಿಲ್ಲಿಸಿ ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಬೈಕ್‍ಗಳನ್ನು ಆರೋಪಿ ಶಂಕರಪ್ಪ ಕದ್ದು ಚಾಮರಾಜನರ ಜಿಲ್ಲೆ ಮತ್ತು ಗಡಿ ಭಾಗದ ಗ್ರಾಮಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ನಂಜನಗೂಡು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಬೈಕ್ ಕಳ್ಳನನ್ನು ಪತ್ತೆ ಹಚ್ಚುವ ಸಲುವಾಗಿ ನಗರ ಪೊಲೀಸ್‍ ಠಾಣೆಯ ಇನ್ಸ್‌ಪೆಕ್ಟರ್‌ ಬಸವರಾಜು ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರಕಾಶ್ ಮೂದ್ಲೂರು, ಅಪರಾಧ ವಿಭಾಗದ ಪಿಎಸ್‌ಐ ಮಾದೇಗೌಡ ಅವರ ನೇತೃತ್ವದಲ್ಲಿ ಎಎಸ್‌ಐ ಎನ್.ಸತೀಶ್, ಹಫಿಜುಲ್ಲಾ ಷರಿಫ್, ಸಿಬ್ಬಂದಿ ಶ್ರೀನಿವಾಸ, ಜಯರಾಮು, ಶಿವಕುಮಾರ್, ತಿಮ್ಮಯ್ಯ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಜೂ.8ರಂದು ಪೊಲೀಸರ ತಂಡವು ಶ್ರೀಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆರೋಪಿ ಶಂಕರಪ್ಪ ದಾಸೋಹ ಭವನದ ಮುಂಭಾಗದ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಬೈಕ್‍ಗಳ ಹ್ಯಾಂಡಲ್‍ಗಳನ್ನು ಅಲುಗಾಡಿಸಿದ್ದು ಗಮನಕ್ಕೆ ಬಂದಿದೆ. ಕೂಡಲೇ ಅವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 19 ಬೈಕ್‍ಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಎಎಸ್ಪಿ ನಂದಿನಿ, ಹೆಚ್ಚುವರಿ ಅಧೀಕ್ಷಕರಾದ ನಾಗೇಶ್, ಡಿವೈಎಸ್ಪಿ ರಘು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.