ADVERTISEMENT

ಐವರು ದರೋಡೆಕೋರರ ಬಂಧನ

ನಗರದ ಹೃದಯ ಭಾಗದಲ್ಲೇ ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:16 IST
Last Updated 22 ಜುಲೈ 2019, 20:16 IST

ಮೈಸೂರು: ದೇವರಾಜ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ನಗರದ ಹೃದಯಭಾಗವಾದ ಚಲುವಾಂಬ ಆಸ್ಪತ್ರೆ ಮುಂಭಾಗವೇ ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ದರೋಡೆಕೋರರನ್ನು ಸೋಮವಾರ ನಸುಕಿನಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಉದಯಗಿರಿ ಬಡಾವಣೆ ನಿವಾಸಿಗಳಾದ ಸಮೀರ್‌ ಪಾಷಾ, ಇಜಾಜ್‌ಪಾಷಾ, ಸೈಯದ್ ಸಲೀಂ, ಸೈಯದ್ ಸಲೀಂ ಹಾಗೂ ಸಲೀಂ ಬಂಧಿತರು. ಇವರೆಲ್ಲ 20ರಿಂದ 25 ವರ್ಷದ ವಯೋಮಾನದವರಾಗಿದ್ದು, ಇವರಿಂದ ಮಾರಕಾಸ್ತ್ರಗಳು ಹಾಗೂ ಖಾರದಪುಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವರು ಆಟೊದಲ್ಲಿ ಚಲುವಾಂಬ ಆಸ್ಪ‌ತ್ರೆಯ ಮುಂಭಾಗ ಬಂದು ಆಸ್ಪತ್ರೆಯ ಕಾಂಪೌಂಡ್‌ ಬಳಿ ಹೊಂಚು ಹಾಕುತ್ತ ಕುಳಿತಿದ್ದರು. ರಾತ್ರಿ ವೇಳೆ ರೈಲಿನಲ್ಲಿ ಬಂದು ಬಸ್‌ನಿಲ್ದಾಣಕ್ಕೆ ಹೋಗುವ ಸಾರ್ವಜನಿಕರು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳ ಸಂಬಂಧಿಕರೇ ಇವರ ‘ಟಾರ್ಗೆಟ್‌’ ಆಗಿದ್ದರು.

ADVERTISEMENT

ಒಬ್ಬರೇ ನಡೆದುಕೊಂಡು ಹೋಗುವವರ ಮುಖಕ್ಕೆ ಖಾರದಪುಡಿ ಎರಚಿ, ಮೊಬೈಲ್, ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡುವ ಉದ್ದೇಶ ಹೊಂದಿದ್ದರು. ಹೆಚ್ಚಾಗಿ ಇವರು ಮೊಬೈಲ್‌ಗಳನ್ನು ಕಸಿದುಕೊಂಡು ಹೋಗುತ್ತಿದ್ದರು. ಮೊಬೈಲ್ ಕಳೆದುಕೊಂಡ ಬಹಳಷ್ಟು ಮಂದಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿರಲಿಲ್ಲ. ಹೀಗಾಗಿ, ಇವರ ಕೃತ್ಯಗಳು ನಡೆದೇ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ದೇವರಾಜ ಠಾಣೆಯ ಎಎಸ್‌ಐ ವಿಶ್ವನಾಥ್, ದಫೇದಾರ್ ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.