ADVERTISEMENT

ದುರಂಹಕಾರದ ಮದ್ದನ್ನು ನೀಡಬೇಕಾದ್ದು ನರೇಂದ್ರ ಮೋದಿಗೆ: ಧ್ರುವನಾರಾಯಣ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಧ್ರುವನಾರಾಯಣ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 8:53 IST
Last Updated 4 ಜುಲೈ 2021, 8:53 IST
ಆರ್. ಧ್ರುವನಾರಾಯಣ
ಆರ್. ಧ್ರುವನಾರಾಯಣ   

ಮೈಸೂರು: ದುರಂಹಕಾರದ ಔಷಧವನ್ನು ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.‌

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದುರಂಹಕಾರದ ಔಷಧವನ್ನು ದೇಶದಲ್ಲಿ ಇನ್ನೂ ಕಂಡು ಹಿಡಿದಿಲ್ಲ ಎಂದು ರಾಹುಲ್‌ ಗಾಂಧಿ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಕಿಡಿಕಾರಿದ ಅವರು, ಕೂಡಲೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಳೆದ ಫೆಬ್ರುವರಿಯಲ್ಲಿ ಕೋವಿಡ್ ಕುರಿತು ಮೊದಲು ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರ ಗೇಲಿ ಮಾಡಿತು. ಸರ್ವಾಧಿಕಾರಿ ಧೋರಣೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ. ಮೊದಲು ಇವರಿಗೆ ದುರಂಹಕಾರದ ಔಷಧ ನೀಡಬೇಕು ಎಂದು ಹರಿಹಾಯ್ದರು.

ADVERTISEMENT

ರಾಹುಲ್‌ ಗಾಂಧಿ ಅವರ ತೇಜೋವಧೆಯಾಗುವಂತಹ ಹೇಳಿಕೆ ನೀಡುವುದರ ಬದಲು ಬಿಜೆಪಿ ಅಧಿಕಾರಕ್ಕೆ ಬಂದಾಗ ಜಿಡಿಪಿ ಎಷ್ಟಿತ್ತು. ಈಗ ಎಷ್ಟಿದೆ ಎಂಬುದರ ಕುರಿತು ಪ್ರಲ್ಹಾದ್ ಜೋಶಿ ಮಾತನಾಡಲಿ ಎಂದು ಸವಾಲೆಸೆದರು.

ಈಗಲೂ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಸಿಗುತ್ತಿಲ್ಲ. ಸರ್ಕಾರ ನೀಡುತ್ತಿರುವ ಅಂಕಿಅಂಶಗಳು ಸುಳ್ಳುಗಳಿಂದ ಕೂಡಿವೆ. ಸಚಿವರ ಮಧ್ಯೆ ಸಮನ್ವಯತೆ ಇಲ್ಲ ಎಂದು ಹೇಳಿದರು.

ಜನರ ಜೀವ ಉಳಿಸಬೇಕಾದ ಸಚಿವರು ಮುಖ್ಯಮಂತ್ರಿಯನ್ನು ಕೆಳಗಿಳಿಸಲು ದೆಹಲಿಗೆ ಪದೇ ಪದೇ ಹೋಗಿ ಬರುತ್ತಿದ್ದಾರೆ. ಇವರಿಗೆ ಜನರ ಜೀವಕ್ಕಿಂತ ಹೆಚ್ಚಾಗಿ ಅಧಿಕಾರದ ದಾಹವೇ ಮುಖ್ಯವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.