ADVERTISEMENT

ಸಿದ್ದನಹುಂಡಿ ಶ್ರೀನಿವಾಸ ಮೂರ್ತಿಗೆ ಸಸ್ಯತಳಿ ಸಂರಕ್ಷಕ ಪ್ರಶಸ್ತಿ

ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಂದ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 12:09 IST
Last Updated 23 ಅಕ್ಟೋಬರ್ 2019, 12:09 IST
ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ದೇಸಿ ಭತ್ತದ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಟಿ.ನರಸೀಪುರ ತಾಲ್ಲೂಕಿನ ಸಿದ್ದನಹುಂಡಿಯ ಶ್ರೀನಿವಾಸಮೂರ್ತಿ ಅವರಿಗೆ ಸಸ್ಯತಳಿ ಸಂರಕ್ಷಕ ಪ್ರಶಸ್ತಿ ವಿತರಿಸಿದರು
ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ದೇಸಿ ಭತ್ತದ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಟಿ.ನರಸೀಪುರ ತಾಲ್ಲೂಕಿನ ಸಿದ್ದನಹುಂಡಿಯ ಶ್ರೀನಿವಾಸಮೂರ್ತಿ ಅವರಿಗೆ ಸಸ್ಯತಳಿ ಸಂರಕ್ಷಕ ಪ್ರಶಸ್ತಿ ವಿತರಿಸಿದರು   

ಮೈಸೂರು: ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಕೊಡುವ 'ಸಸ್ಯ ತಳಿ ಸಂರಕ್ಷಕ' ಪ್ರಶಸ್ತಿಗೆ ಟಿ.ನರಸೀಪುರ ತಾಲ್ಲೂಕಿನ ಸಿದ್ದನಹುಂಡಿಯ ಶ್ರೀನಿವಾಸಮೂರ್ತಿ ಭಾಜನರಾಗಿದ್ದಾರೆ.

ಸ್ಥಳೀಯ ತಳಿಗಳ ಸಂರಕ್ಷಣೆಯಲ್ಲಿ ಮಹತ್ವದ ಕಾರ್ಯ ಮಾಡಿದ ದೇಶದ ಇಪ್ಪತ್ತು ಮಂದಿ ಬೀಜ ಸಂರಕ್ಷಕರನ್ನು ಗುರುತಿಸಿ, ಪ್ರಾಧಿಕಾರ ಈ ಪ್ರಶಸ್ತಿ ನೀಡುತ್ತದೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಶ್ರೀನಿವಾಸ ಮೂರ್ತಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯು ₹ 1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ADVERTISEMENT

ಸಹಜ ಸಮೃದ್ದ ಮತ್ತು ಭತ್ತ ಉಳಿಸಿ ಆಂದೋಲನದ ಮಾರ್ಗದರ್ಶನದಲ್ಲಿ ದೇಸಿ ಭತ್ತದ ತಳಿಗಳ ಸಂರಕ್ಷಣೆಗೆ ತೊಡಗಿಸಿಕೊಂಡ ಶ್ರೀನಿವಾಸಮೂರ್ತಿ, ಎರಡು ನೂರು ಭತ್ತದ ತಳಿಗಳನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ಆಸಕ್ತರಿಗೆ ಹಂಚುತ್ತಿದ್ದಾರೆ.

ಸ್ಥಳೀಯಶಾಲೆಯ ಮಕ್ಕಳು ಮತ್ತು ಯುವಕರನ್ನು ಬೀಜ ಸಂರಕ್ಷಣೆಗೆ ತೊಡಗಿಸಿರುವ ಶ್ರೀನಿವಾಸ್, ದೇಶದ ವಿವಿಧ ಭಾಗಗಳ ರೈತರಿಗೆ ಬೀಜ ಸಂರಕ್ಷಣೆಯ ಪಾಠ ಹೇಳಿಕೊಟ್ಟಿದ್ದಾರೆ. ಮೈಸೂರಿನ ಗ್ರಾಹಕರಿಗೆ ಇವರ ಗದ್ದೆಯ ಸಾವಯವ ಅಕ್ಕಿ ಚಿರಪರಿಚಿತ. ರೈತರ ಬೀಜ ಕಂಪನಿ ಸಹಜ ಸೀಡ್ಸ್‌ನ ಆಡಳಿತ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಇವರ ಸಾಧನೆ ಗುರುತಿಸಿ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.