ಮೈಸೂರು: ‘ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಇಲ್ಲಿನ ತಿಲಕ್ನಗರದ ಈದ್ಗಾ ಮೈದಾನ ಮುಂಭಾಗದ ಎ.ಆರ್.ಕನ್ವೆನ್ಷನ್ ಹಾಲ್ನಲ್ಲಿ ಆ.10ರಂದು ಸಂಜೆ 4ಕ್ಕೆ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಬ್ಯಾರಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಯು.ಎಚ್.ಉಮರ್ ತಿಳಿಸಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಕ್ಸೂದ್ ಅಹ್ಮದ್ ಮುಲ್ಕಿ, ಬ್ಯಾರಿ ಹಾಡುಗಾರ ಪಿ.ಎ.ಹಸನಬ್ಬ ಮೂಡುಬಿದ್ರೆ, ಬ್ಯಾರಿ ಕವಿ ಹೈದರ್ ಅಲಿ ಕಾಟಿಪಳ್ಳ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ಸೇಠ್ ‘ಬೆಲ್ಕಿರಿ’ ದ್ವೆಮಾಸಿಕ ಬಿಡುಗಡೆ ಮಾಡುವರು’ ಎಂದು ಮಾಹಿತಿ ನೀಡಿದರು.
‘ಅಂದು ಬೆಳಿಗ್ಗೆ 11ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಬ್ದುಲ್ ಅಜೀಜ್ ಉದ್ಘಾಟಿಸುವರು. ಮಹಿಳೆಯರಿಗೆ ಬ್ಯಾರಿ ಸಂಪ್ರದಾಯದ ಆಹಾರ ಮತ್ತು ಮೆಹಂದಿ ವಿನ್ಯಾಸ, ಮಕ್ಕಳಿಗೆ ಬ್ಯಾರಿ ಹಾಡು, ಪುರುಷ, ಮಹಿಳೆಯರಿಗೆ ಬ್ಯಾರಿ ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ. ದಫ್ ಕುಣಿತ, ಒಪ್ಪನೆ ಹಾಡು, ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.
ಹಾಜಿ ಯು.ಕೆ.ಹಮೀದ್, ಎಂ.ಐ.ಅಹ್ಮದ್ ಬಾವ, ಆರಂಗಳ ಅಬ್ದುಲ್ ಹಮೀದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.