ಮೈಸೂರು: 2020-21ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ನೀಡಲಾಗುವುದು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಅರಣ್ಯ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವವರು ಆರ್ಜಿ ಸಲ್ಲಿಸಬಹುದು.
ರಾಜ್ಯ ಮಟ್ಟದ ಕೃಷಿ ಪಂಡಿತ ಅಥವಾ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ 10 ರೈತರಿಗೆ (ತಲಾ ₹ 50 ಸಾವಿರ), ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಜಿಲ್ಲೆಯ 10 ರೈತರಿಗೆ (ಒಂದು ಕ್ಷೇತ್ರಕ್ಕೆ 2 ರಂತೆ, ತಲಾ ₹ 25 ಸಾವಿರ), ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ಆಯ್ಕೆಯಾದ ತಾಲ್ಲೂಕಿನ 5 ರೈತರಿಗೆ (ಆಯ್ಕೆಯಾದ 5 ಕ್ಷೇತ್ರಗಳಲ್ಲಿ ಒಬ್ಬರಂತೆ) ತಲಾ ₹ 10 ಸಾವಿರ ನಗದನ್ನು ಆಯ್ಕೆ ಸಮಿತಿ ತೀರ್ಮಾನದಂತೆ ನೀಡಲಾಗುವುದು.
ಆತ್ಮ ಯೋಜನೆಯಡಿ ರಚಿತವಾಗಿ ಗುರುತಿಸಲ್ಪಟ್ಟಿರುವ ರೈತರು ಮತ್ತು ರೈತ ಮಹಿಳೆಯರ ಆಸಕ್ತ ಗುಂಪುಗಳು, ಆಹಾರ ಭದ್ರತಾ ಗುಂಪುಗಳು ಇತ್ಯಾದಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಂಪುಗಳನ್ನು ಗುರುತಿಸಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ 5 ರೈತರ ಗುಂಪುಗಳಿಗೆ ಜಿಲ್ಲಾ ಹಂತದಲ್ಲಿ ತಲಾ ₹ 20 ಸಾವಿರ ಪ್ರಶಸ್ತಿ ನೀಡಲು ಅವಕಾಶವಿರುತ್ತದೆ. ಇದನ್ನು ಸಹ ಆಯ್ಕೆ ಸಮಿತಿಯ ತೀರ್ಮಾನದಂತೆ ಕೊಡಲಾಗುವುದು.
ಅರ್ಹ ಆಸಕ್ತ ರೈತರು, ರೈತ ಮಹಿಳೆಯರು ಮತ್ತು ರೈತರ ಗುಂಪುಗಳು ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೆ.7ರೊಳಗಾಗಿ ಅಲ್ಲಿಯೇ ಅರ್ಜಿ ಸಲ್ಲಿಸಬಹುದು ಎಂದು ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಉಪ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.