
ಬೆಟ್ಟದಪುರ: ‘ಸಮಾಜದಲ್ಲಿ ಅನ್ಯಾಯ, ದೌರ್ಜನ್ಯಕ್ಕೆ ಒಳಗಾದವರು ಹಾಗೂ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಈ ಕಾರ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು’ ಎಂದು ಸಾಮಾಜಿಕ ಚಿಂತಕ ಚಾಮರಾಯನಕೋಟೆ ಜಗದೀಶ್ ಅಭಿಪ್ರಾಯಪಟ್ಟರು.
ಸಮೀಪದ ಸೀಗೆಕೋರೆಕಾವಲು (ಬಿ.ಬ್ಲಾಕ್) ನಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
‘ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ತತ್ವಗಳ ಮೂಲಕ ಶೋಷಿತರಿಗೆ ನ್ಯಾಯದ ದಾರಿ ತೋರಿಸಿದ್ದಾರೆ. ಅವರ ಆಲೋಚನೆಗಳು ಇಂದಿನ ಸಮಾಜದಲ್ಲೂ ಅತ್ಯಂತ ಪ್ರಭಾವ ಬೀರಿದೆ. ಸಂವಿಧಾನವೇ ನಮ್ಮ ಶಕ್ತಿ, ಅದನ್ನು ಅರಿತು, ಅನುಸರಿಸಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದೊರಕಿಸಿಕೊಡುವ ಕೆಲಸ ನಿರಂತರವಾಗಿರಬೇಕು’ ಎಂದು ತಿಳಿಸಿದರು.
ಗ್ರಾಮದ ಮುಖಂಡ ಸಿ. ಕೃಷ್ಣ ಮಾತನಾಡಿ, ‘ಗ್ರಾಮಕ್ಕೆ ರಸ್ತೆ ಸಮಸ್ಯೆ ಎದುರಾದಾಗ ಸಾಕಷ್ಟು ಕಾನೂನು ಹೋರಾಟ ನಡೆಸಿ ರಸ್ತೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದೇವೆ. ಕಾನೂನಾತ್ಮಕವಾಗಿ ಮಾಡಿರುವ ರಸ್ತೆಯನ್ನು ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು ಬರುತ್ತಿದ್ದಾರೆ. ಸಂಘಟನೆಯ ಮೂಲಕ ನಮಗೆ ಬೇಕಾಗುವ ಮೂಲಸೌಕರ್ಯಗಳನ್ನು ಒದಗಿಸಿ, ಗ್ರಾಮಕ್ಕೆ ಒಳಿತು ಮಾಡಬೇಕು’ ಎಂದು ಮನವಿ ಮಾಡಿದರು.
ಭೀಮ್ ಆರ್ಮಿ ಗಿರೀಶ್, ಪಿಡಿಒ ಅವಿನಾಶ್ ಮಾತನಾಡಿದರು.
ಇದೇ ವೇಳೆ ಅಂಬೇಡ್ಕರ್ ಸೇವಾ ಸಮಿತಿಯ ನಾಮಫಲಕವನ್ನು ಅನಾವರಣ ಮಾಡಲಾಯಿತು.
ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಪ್ರಕಾಶ್, ಖಜಾಂಚಿ ಸುರೇಶ್, ಕಾರ್ಯದರ್ಶಿ ದಿನೇಶ್, ಮುಖಂಡರಾದ ಪ್ರದೀಪ್, ಅಣ್ಣಯ್ಯ, ಕೃಷ್ಣಯ್ಯ, ಸೋಮಯ್ಯ, ಚಮ್ಮಣ್ಣ, ಚೆನ್ನಮ್ಮ, ಚಲುವಯ್ಯ, ರಾಜೇಶ್, ಲಲಿತಮ್ಮ, ಕೃಷ್ಣ, ಶಿವಣ್ಣ, ವೈರಮುಡಿ, ದಿನೇಶ್, ಲಾಳಪ್ರಸಾದ್ ಸಣ್ಣಮ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.