ADVERTISEMENT

‘ದೇಶದ ಜನ ಭಗತ್‌ಸಿಂಗ್‌ ಕ್ಷಮೆ ಕೋರಬೇಕು’

ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಉಮೇಶ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 10:08 IST
Last Updated 28 ಜುಲೈ 2019, 10:08 IST
ಮೈಸೂರಿನಲ್ಲಿ ಸಿಐಟಿಯು ವತಿಯಿಂದ ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಉಮೇಶ್ ಮಾತನಾಡಿದರು. ವಿಮಾ ನಿಗಮ ನೌಕರರ ಸಂಘ ಅಧ್ಯಕ್ಷ ಎನ್.ವಿಜಯಕುಮಾರ್, ಸಿಐಟಿಯು ಮೈಸೂರು ಜಿಲ್ಲೆ ಅಧ್ಯಕ್ಷ ಬಾಲಾಜಿರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ಇದ್ದಾರೆ
ಮೈಸೂರಿನಲ್ಲಿ ಸಿಐಟಿಯು ವತಿಯಿಂದ ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಉಮೇಶ್ ಮಾತನಾಡಿದರು. ವಿಮಾ ನಿಗಮ ನೌಕರರ ಸಂಘ ಅಧ್ಯಕ್ಷ ಎನ್.ವಿಜಯಕುಮಾರ್, ಸಿಐಟಿಯು ಮೈಸೂರು ಜಿಲ್ಲೆ ಅಧ್ಯಕ್ಷ ಬಾಲಾಜಿರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ಇದ್ದಾರೆ   

ಮೈಸೂರು: ಕೇಂದ್ರ ಸರ್ಕಾರ ಉದ್ದೇಶಿಸಿರುವಂತೆ ಕಾರ್ಮಿಕ ಕಾಯ್ದೆಯನ್ನು ನಾಲ್ಕು ಸಂಹಿತೆಗಳನ್ನಾಗಿ ಆಮೂಲಾಗ್ರ ಬದಲಾವಣೆ ಮಾಡಿದ್ದೇ ಆದಲ್ಲಿ, ದೇಶದ ಜನ ಭಗತ್‌ಸಿಂಗ್‌ ಅವರ ಕ್ಷಮೆ ಕೋರಬೇಕು ಎಂದು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್ ಅಭಿಪ್ರಾಯಪಟ್ಟರು.

ಸಿಐಟಿಯು 50ನೇ ವರ್ಷಾಚರಣೆ ಪ್ರಯುಕ್ತ, ಹಾಸನದಲ್ಲಿ ನಡೆಯಲಿರುವ ಸಾಮಾನ್ಯ ಮಂಡಳಿ ಸಭೆಯ ಭಾಗವಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಅಂದು ಬ್ರಿಟಿಷರು ಇದೇ ಸ್ವರೂಪದ ಕಾಯ್ದೆಯನ್ನು ಜಾರಿಗೊಳಿಸಲು ಚಿಂತಿಸಿದ್ದರು. ಅದನ್ನು ವಿರೋಧಿಸಿ ಭಗತ್‌ಸಿಂಗ್ ಬಾಂಬ್ ಎಸೆದು, ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಈಗ ಮತ್ತೆ ಅದೇ ಸ್ವರೂಪದ ಕಾಯ್ದೆಗಳು ಜಾರಿಗೆ ಬರುತ್ತಿವೆ’ ಎಂದು ವಿಷಾದಿಸಿದರು.

ADVERTISEMENT

‘ಈ ಕಾಯ್ದೆಯ ಜಾರಿಯನ್ನು ತಡೆಯಲು ಐದು ವರ್ಷಗಳಿಂದ ನಾಲ್ಕು ಸಾರ್ವತ್ರಿಕ ಮುಷ್ಕರಗಳನ್ನು ಹಾಗೂ ಸಂಸತ್‌ ಚಲೊ ಚಳವಳಿಗಳನ್ನು ನಡೆಸಲಾಯಿತು. ಆದರೂ, ಸರ್ಕಾರ ಕಾಯ್ದೆ ಜಾರಿಗೊಳಿಸಲು ಅಣಿಯಾಗಿದೆ. ಅಂದು ಸರಿಯಲ್ಲ ಎಂದಿದ್ದನ್ನು,ಇಂದು ಸರಿ ಎಂದು ಒಪ್ಪಿಸಲಾಗುತ್ತಿದೆ. ಇದರ ವಿರುದ್ಧದ ಗಟ್ಟಿದನಿ, ಪಿಸುದನಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಸ್ಥಾಪ‍ನೆಯಾಗಿ (1919) ಈ ವರ್ಷಕ್ಕೆ ನೂರು ವರ್ಷವಾಗಿದೆ. ಜಲಿಯನ್‌ ವಲಾಭಾಗ್ ದುರಂತಕ್ಕೂ ನೂರು ವರ್ಷವಾಗಿದೆ. ಆದರೆ, ದೇಶದ ಜನ ಈ ಎರಡೂ ಮಹತ್ವದ ಸಂಗತಿಗಳನ್ನು ಸ್ಮರಿಸುತ್ತಿಲ್ಲ ಎಂದು ಹೇಳಿದರು.

‘ಶಾಸಕರು ಶಾಸನಸಭೆ ಹೋಗುವಂತೆ ಬಲವಂತ ಮಾಡುವಂತಿಲ್ಲ ಎನ್ನುವುದಾದರೇ ಕಾರ್ಮಿಕರನ್ನೂ ಕಾರ್ಖಾನೆಗೆ ಹೋಗಿ ಕೆಲಸ ಮಾಡಿ ಎಂದು ಒತ್ತಾಯಿಸುವಂತಿಲ್ಲ ಎಂದು ನಾವೂ ಕೇಳಬಹುದಲ್ಲವೇ ಎಂದು ಪ್ರಶ್ನಿಸಿದ ಅವರು ಮೂರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಮ್ಮನ್ನೂ ಶಾಲೆಗೆ ಹೋಗಿ ಎಂದು ಒತ್ತಾಯಿಸುವಂತಿಲ್ಲ ಎಂದು ಹೇಳಿದಳು. ಇದನ್ನು ಏನನ್ನೋ ಬೇಕೋ ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವಿಮಾ ನೌಕರರ ಸಂಘದ ಅಧ್ಯಕ್ಷ ಎನ್.ವಿಜಯಕುಮಾರ್, ಸಿಐಟಿಯು ಅಧ್ಯಕ್ಷ ಬಾಲಾಜಿರಾವ್ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.