ಮೈಸೂರು: ಹಕ್ಕಿಜ್ವರ ದೃಢಪಟ್ಟ ಇಲ್ಲಿನ ಕುಂಬಾರಕೊಪ್ಪಲಿನ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ 6,436 ಪಕ್ಷಿಗಳನ್ನು ಗುರುತಿಸಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಕೊಲ್ಲುವ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ.
ಮಾಂಸದ ಕೋಳಿಗಳಲ್ಲದೆ ಈ ಪ್ರದೇಶದ ಮನೆಗಳಲ್ಲಿ ಸಾಕಿರುವ ಗೌಜಲ ಹಕ್ಕಿ, ಗಿಳಿ, ಪಾರಿವಾಳಗಳನ್ನೂ ನಾಶ ಮಾಡಲಾಗುತ್ತಿದೆ. ಕೋಳಿಗಳ ನಾಶಕ್ಕೆ ಜಿಲ್ಲಾಡಳಿತವು ಐದು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಿದೆ. ಪ್ರತಿ ತಂಡಕ್ಕೆ ಸಾವಿರ ಪಕ್ಷಿಗಳನ್ನು ಕೊಲ್ಲುವ ಗುರಿ ನೀಡಲಾಗಿದೆ. ಮಂಗಳವಾರ ಸಂಜೆಯವರೆಗೆ 4,100 ಕೋಳಿಗಳನ್ನು ನಾಶಪಡಿಸಲಾಗಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ.
ನಾಶ ಮಾಡಲಾದ ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗಿದ್ದು, ಸುಣ್ಣ ಹಾಗೂ ಮಣ್ಣು ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ಕುಂಬಾರಕೊಪ್ಪಲಿನಲ್ಲಿ ಸತ್ತಿದ್ದ ಕೋಳಿ ಹಾಗೂ ಕೊಕ್ಕರೆಯಲ್ಲಿ ಎಚ್5ಎನ್1 ರೋಗಾಣು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಪಕ್ಷಿಗಳು ಸತ್ತು ಬಿದ್ದಿದ್ದ ಸ್ಥಳದ ಸುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ‘ರೋಗಪೀಡಿತ’ ವಲಯ, 1 ರಿಂದ 10 ಕಿ.ಮೀ. ವರೆಗಿನ ಸುತ್ತಳತೆ ಪ್ರದೇಶವನ್ನು ‘ಜಾಗೃತ ವಲಯ’ ಎಂದೂ ಘೋಷಿಸಲಾಗಿದೆ. 10 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.