ADVERTISEMENT

ಮೈಸೂರು: ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಮತದಾನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 16:28 IST
Last Updated 31 ಮಾರ್ಚ್ 2023, 16:28 IST

ಮೈಸೂರು: ವಿಧಾನಸಭೆ ಚುನಾವಣೆಗೆ ಜಿಲ್ಲೆಯ 11 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿಯಿಂದ ಸ್ಥಳೀಯ ಮುಖಂಡರಿಂದ ಮತದಾನ ಪ್ರಕ್ರಿಯೆಯನ್ನು ಶುಕ್ರವಾರ ಇಲ್ಲಿ ನಡೆಸಲಾಯಿತು.

ಪಕ್ಷದ ಜಿಲ್ಲೆಯ ಗ್ರಾಮಾಂತರ ಘಟಕದ ವ್ಯಾಪ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕುವೆಂಪುನಗರದ ಸಾಮ್ರಾಟ್ ಕಲ್ಯಾಣಮಂಟಪ ಹಾಗೂ ನಗರದ ಕ್ಷೇತ್ರಗಳಿಗೆ ಪಕ್ಷದ ಕಚೇರಿಯಲ್ಲಿ ಮತದಾನ ನಡೆಯಿತು.

ತಲಾ ನಾಲ್ಕೈದು ಮತಗಟ್ಟೆಗಳು ಒಳಗೊಂಡಂತೆ ರಚಿಸಿರುವ ಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ 5ರಿಂದ 6 ಶಕ್ತಿ ಕೇಂದ್ರಗಳು ಒಳಗೊಂಡ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅವರವರ ಅಭಿಪ್ರಾಯವನ್ನು ದಾಖಲಿಸಿದರು.

ADVERTISEMENT

ಶೇ 80ರಷ್ಟು ಪದಾಧಿಕಾರಿಗಳು ಭಾಗವಹಿಸಿದ್ದರು. ಅವರಿಗೆ ಮೂವರು ಹೆಸರುಗಳನ್ನು ಸೂಚಿಸುವ ಆಯ್ಕೆ ನೀಡಲಾಗಿತ್ತು. ಪ್ರಾಶಸ್ತ್ಯದ ಮೂಲಕ ತಿಳಿಸುವ ಅವಕಾಶ ಕೊಡಲಾಗಿತ್ತು. ಗುಪ್ತ ಮತದಾನದ ಮೂಲಕ ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಂಚೂಣಿ ಕಾರ್ಯಕರ್ತರ ಅಭಿಪ್ರಾಯವನ್ನು ರಾಜ್ಯ ಘಟಕದ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ. ಅದನ್ನು ಆಧರಿಸಿ ಸ್ಥಳೀಯ ನಾಯಕರ ಒಲವು ಯಾರ ಕಡೆಗಿದೆ ಎಂಬುದನ್ನು ಅರಿಯುವ ಪ್ರಯತ್ನವನ್ನು ವರಿಷ್ಠರು ಮಾಡಲಿದ್ದಾರೆ. ಅಭ್ಯರ್ಥಿಗಳು ಆಯ್ಕೆಗೆ ನಡೆಸುತ್ತಿರುವ ಮೊದಲ ಹಂತದ ಪ್ರಕ್ರಿಯೆ ಇದಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗ್ರಾಮಾಂತರ ವಿಭಾಗದ ಪ್ರಕ್ರಿಯೆಯು ವೀಕ್ಷಕರಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ನಂದೀಶ್‌ ರೆಡ್ಡಿ ಮತ್ತು ನಗರದ ಕ್ಷೇತ್ರಗಳದ್ದು ವಿಧಾನಪರಿಷತ್ ಸದಸ್ಯರಾದ ತುಳಸಿ ಮುನಿರಾಜುಗೌಡ, ಛಲವಾದಿ ನಾರಾಯಣಸ್ವಾಮಿ ಅವರ ಸಮ್ಮುಖದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.