ಮೈಸೂರು: ರಾಗಿಣಿಗೆ ಡ್ರಗ್ಸ್ ತಗೋ ಅಂತ ಹೇಳಿರಲಿಲ್ಲ. ಅವರ ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದರು.
ಡ್ರಗ್ಸ್ ವಿಚಾರದಲ್ಲಿ ಆ ಪಕ್ಷ, ಈ ಪಕ್ಷ ಅಂತ ಬರಲ್ಲ. ಯಾವ ಪಕ್ಷದವರು ತಪ್ಪು ಮಾಡಿದರೂ ತಪ್ಪೇ. ಈ ಸಂಬಂಧ ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಚಿತ್ರ ನಟ, ನಟಿಯರಿಗೆ ಸಮಾಜದಲ್ಲಿ ಜನಪ್ರಿಯತೆ ಇರುತ್ತೆ. ಅವರೇ ಡ್ರಗ್ಸ್ ಸೇವನೆ ಮಾಡಿದ್ರೆ ಸಮಾಜಕ್ಕೆ ಯಾವ ರೀತಿ ಸಂದೇಶ ರವಾನೆ ಆಗುತ್ತೆ. ಆದ್ದರಿಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಪ್ರತಿ ದಿನವೂ ಮುಖ್ಯಮಂತ್ರಿ ಅವರೇ ಡ್ರಗ್ಸ್ ಪ್ರಕರಣದ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಡ್ರಗ್ಸ್ನಿಂದ ಯುವ ಸಮೂಹ ಹಾಳಾಗುತ್ತೆ. ಆದ್ದರಿಂದ ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವ ಇರಲಿ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಡ್ರಗ್ಸ್ ಹಣದಿಂದ ಮೈತ್ರಿ ಸರ್ಕಾರ ಪತನ ಎಂಬ ಎಚ್.ಡಿ.ಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡ್ರಗ್ ಹಣದಲ್ಲಿ ಸರ್ಕಾರ ಬೀಳಿಸುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಕುಮಾರಸ್ವಾಮಿ ಈಗ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಆಗ ಅವರೇ ಅಧಿಕಾರದಲ್ಲಿದ್ದರು ಇದನ್ನು ಮಟ್ಟ ಹಾಕಬಹುದಾಗಿತ್ತು. ಆಗ ಸುಮ್ಮನೆ ಇದ್ದು ಈಗ ಮಾತನಾಡಿದರೆ ಹೇಗೆ? ಅವರು ಸಿಎಂ ಆಗಿದ್ದಾಗ ಯಾವ ಕ್ರಮ ಬೇಕಾದರೂ ಕೈಗೊಳ್ಳಬಹುದಿತ್ತು ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.