ADVERTISEMENT

ಎಚ್.ಡಿ. ಕೋಟೆ: ಕಬಿನಿ ಜಲಾಶಯಕ್ಕೆ ಮುತ್ತಿಗೆ, ಬಿಜೆಪಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 13:47 IST
Last Updated 4 ಅಕ್ಟೋಬರ್ 2023, 13:47 IST
ಕಬಿನಿ ಜಲಾಶಯಕ್ಕೆ ಬುಧವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರೈತ ಮೋರ್ಚಾ ಮುಖಂಡರನ್ನು ಪೊಲೀಸರು ಬಂಧಿಸಿದರು
ಕಬಿನಿ ಜಲಾಶಯಕ್ಕೆ ಬುಧವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರೈತ ಮೋರ್ಚಾ ಮುಖಂಡರನ್ನು ಪೊಲೀಸರು ಬಂಧಿಸಿದರು   

ಎಚ್.ಡಿ. ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರನ್ನು ಬಿಡುತ್ತಿರುವುದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಸಿದರು.

ಬಿಜೆಪಿ ರೈತ ಮೋರ್ಚಾ ಮತ್ತು ತಾಲ್ಲೂಕು ಮಂಡಲ ಬಿಜೆಪಿ ವತಿಯಿಂದ ಕಾರ್ಯಕರ್ತರು ಬೀಚನಹಳ್ಳಿ ಅತಿಥಿ ಗೃಹದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಜಲಾಶಯದ ಮುಂಭಾಗವಿರುವ ಹುತಾತ್ಮ ಗುರುಸ್ವಾಮಿ ಪ್ರತಿಮೆಯವರೆಗೆ ತೆರಳಿ ನಂತರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಳಿಕ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು ಬಂಧಿಸಿ, ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಿ  ಬಿಡುಗಡೆಗೊಳಿಸಿದರು.

ADVERTISEMENT

ರೈತ ಮೋರ್ಚಾ ಕಾರ್ಯದರ್ಶಿ ಡಾ.ನವೀನ್ ಮಾತಾನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜಲಾಶಯಗಳಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರನ್ನು ಬಿಡುತ್ತಿದೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ ಮೇಕೆದಾಟು ಯೋಜನೆಯ ಬಗ್ಗೆ ಕಾಲ್ನಡಿಗೆ ಜಾಥ ಮಾಡಿತ್ತು. ಪ್ರಸ್ತುತ ಅವರದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ ಆ ಬಗ್ಗೆ ಬಾಯಿ ಬಿಡದಿರುವುದು ಹಾಸ್ಯಾಸ್ಪದ’ ಎಂದು ಟೀಕಿಸಿದರು.

‘ಮೇಕೆದಾಟು ಜಾಥಾ ವೇಳೆ ರಾಜ್ಯ ಸರ್ಕಾರದ ಅನುಮತಿಯಿದ್ದರೆ ಯೋಜನೆ ಅನುಷ್ಠಾನ ಸಾಧ್ಯ. ಈಗ ಕಾಂಗ್ರೆಸ್ ಅಧಿಕಾರಿದಲ್ಲಿದ್ದರೂ ಕಣ್ಮುಚ್ಚಿ ಕುಳಿತಿದೆ’ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಮಾತನಾಡಿ, ‘ರಾಜ್ಯ ರೈತರನ್ನು ಎದುರು ಹಾಕಿಕೊಂಡು ನೀರು ಬಿಡುವುದು ಮುಂದುವರಿಸಿದರೆ ಯಾವುದೇ ಕಾರಣಕ್ಕೂ ರೈತ ಕ್ಷಮಿಸಲಾರ, ರೈತ ಧಂಗೆ ಏಳುವ ದಿನಗಳು ದೂರಿಇಲ್ಲ ಎಂದರು.

ಕಬಿನಿ ಜಲಾಶಯದ ಎಇ ಚಂದ್ರಶೇಖರ್‌ ಅವರ ಮೂಲಕ ಕಬಿನಿ ನೀರು ಹರಿಬಿಡದಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್‌ ಕುಮಾರ್, ಮಂಡಲ ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ವೆಂಕಟಸ್ವಾಮಿ,  ಗಿರೀಶ್, ಮಾದಾಪುರ ನಂದೀಶ್, ಶಿವರಾಜಪ್ಪ, ಮೊತ್ತ ಬಸವರಾಜಪ್ಪ, ಸತೀಶ್ ಬಹದ್ದೂರ್, ಚನ್ನಪ್ಪ, ಹೆಗ್ಗುಡಿಲು ಮಹದೇವು, ಲೋಕೇಶ್, ಕೆಂಡಗಣ್ಣಸ್ವಾಮಿ, ಗುರುಸ್ವಾಮಿ, ಕೆಂಡಗಣ್ಣಸ್ವಾಮಿ, ಜೆ.ಪಿ. ಶಿವರಾಜು, ಸೋಮಾಚಾರ್, ಮುರಳಿ, ಅನಿಲ್ ಸರಗೂರು, ನಾಗೇಶ್, ರಾಧಿಕಾ ಶ್ರೀನಾಥ್, ಶಿವಕುಮಾರ್, ರೇಚಣ್ಣ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.