ADVERTISEMENT

ಹೆಣ್ಣು ಮಗುವಿಗೆ ರಕ್ತ ಕ್ಯಾನ್ಸರ್‌: ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 9:49 IST
Last Updated 29 ಅಕ್ಟೋಬರ್ 2021, 9:49 IST
ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ₹23 ಸಾವಿರ ನೆರವನ್ನು ವಿನೋದ್‌ ರಾವ್‌ ಅವರಿಗೆ ನೀಡಲಾಯಿತು
ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ₹23 ಸಾವಿರ ನೆರವನ್ನು ವಿನೋದ್‌ ರಾವ್‌ ಅವರಿಗೆ ನೀಡಲಾಯಿತು   

ಮೈಸೂರು: ‘ವಿದ್ಯಾರಣ್ಯಪುರಂ ನಿವಾಸಿ ಎಸ್‌.ವಿನೋದ್‌ ರಾವ್‌ ಹಾಗೂ ಪೂಜಾ ಬಾಯಿ ದಂಪತಿಯ ಪುತ್ರಿ ಪ್ರತೀಕ್ಷಾ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ₹25 ಲಕ್ಷ ಖರ್ಚಾಗಲಿದೆ. ಬಡವರಾದ ದಂಪತಿಗೆ ಖರ್ಚು ಭರಿಸಲು ಸಾಧ್ಯವಿಲ್ಲದ ಕಾರಣ ದಾನಿಗಳು ಸಹಾಯ ಮಾಡಬೇಕು’ ಎಂದು ಪಾಲಿಕೆ ಸದಸ್ಯೆ ಶೋಭಾ ಮನವಿ ಮಾಡಿದರು.

‘ಗ್ಯಾಸ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‌ ಅವರು ತಮ್ಮ 1 ವರ್ಷ 9 ತಿಂಗಳ ಮಗಳಿಗೆ ಚಿಕಿತ್ಸೆ ಕೊಡಿಸುವ ಓಡಾಟದಲ್ಲಿ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿನೋದ್‌ ರಾವ್‌ ಮಾತನಾಡಿ, ‘ಈವರೆಗೆ ₹4 ಲಕ್ಷ ಖರ್ಚು ಮಾಡಲಾಗಿದೆ. ಮೂಳೆ ಮಜ್ಜೆ ಕಸಿ ಶಸ್ತ್ರಚಿಕಿತ್ಸೆಗೆ (ಬೋನ್‌ ಮ್ಯಾರೊ ಟ್ರಾನ್ಸ್‌ಫ್ಲಾಂಟ್‌) ₹15 ಲಕ್ಷ ಖರ್ಚಾಗಲಿದೆ. ಬಳಿಕ, 6ರಿಂದ 8 ತಿಂಗಳು ಚಿಕಿತ್ಸೆ ಕೊಡಿಸಬೇಕಿದೆ. ಒಟ್ಟು ₹25 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಡುಬಡವನಾದ ನನಗೆ ಅಷ್ಟು ಭರಿಸಲು ಸಾಧ್ಯವಿಲ್ಲ. ದಾನಿಗಳು ಕೈಲಾದ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪೂಜಾ ಬಾಯಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌, ಉಳಿತಾಯ ಖಾತೆ ಸಂಖ್ಯೆ 12490100000654, ಐಎಫ್‌ಎಸ್‌ಸಿ ಕೋಡ್‌ PKGB0012490. ವಿನೋದ್‌ ರಾವ್‌ ಎಸ್‌, ಎಸ್‌ಬಿಐ, ಉಳಿತಾಯ ಖಾತೆ ಸಂಖ್ಯೆ 40462853818, ಐಎಫ್‌ಎಸ್‌ಸಿ ಕೋಡ್‌ SBIN0001316.

ರೋಟರಿ ಸೌತ್‌ ಈಸ್ಟ್‌ ಅಧ್ಯಕ್ಷ ಆರ್‌.ರಮೇಶ್‌ ರಾವ್‌, ವಕೀಲ ಎಸ್‌.ಮಹದೇವಸ್ವಾಮಿ, ಜೆಡಿಎಸ್‌ ಮುಖಂಡ ಗಿರೀಶ್‌ ಗೌಡ, ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಸಂಘದ ಉಪಾಧ್ಯಕ್ಷ ಹೇಮಂತ್‌ ಕುಮಾರ್‌, ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರ್ಮೇಂದ್ರ ಆರ್ಥಿಕ ನೆರವು ನೀಡಿದ್ದು, ಒಟ್ಟು ₹23 ಸಾವಿರವನ್ನು ವಿನೋದ್‌ ರಾವ್‌ ಅವರಿಗೆ ಹಸ್ತಾಂತರಿಸಲಾಯಿತು.

ಪಾಲಿಕೆ ಮಾಜಿ ಸದಸ್ಯ ಸುನೀಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.