ಮೈಸೂರು: ದೀಪಾವಳಿ ಆಚರಣೆ ಸಂದರ್ಭ ದೇವರ ಚಿತ್ರವಿರುವ ಪಟಾಕಿ ಸಿಡಿಸಬಾರದು, ಚೀನಾ ಪಟಾಕಿಯನ್ನು ಬಹಿಷ್ಕರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಘಟಕ ಮನವಿ ಮಾಡಿದೆ.
‘ಹಬ್ಬದ ದಿನ ಮನೆಯೊಳಗೆ ಲಕ್ಷ್ಮೀಯನ್ನು ಪೂಜಿಸಿ, ಹೊರಗಡೆ ಲಕ್ಷ್ಮೀಯ ಭಾವಚಿತ್ರವಿರುವ ಪಟಾಕಿ ಸಿಡಿಸಿ, ಅದನ್ನು ಚಪ್ಪಲಿ ಕಾಲಲ್ಲಿ ತುಳಿದುಕೊಂಡು ಓಡಾಡುವುದು ವಿಪರ್ಯಾಸ. ಯಾರೊಬ್ಬರೂ ದೇವರ ಚಿತ್ರವಿರುವ ಪಟಾಕಿ ಸಿಡಿಸಬೇಡಿ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಕೋರಿದರು.
‘ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ, ಪದೇ ಪದೇ ತಗಾದೆ ತೆಗೆಯುವ ಚೀನಾಗೆ ಬುದ್ಧಿ ಕಲಿಸಬೇಕು ಎಂದರೇ; ಆ ದೇಶ ತಯಾರಿಸುವ ಪಟಾಕಿ ಸೇರಿದಂತೆ ಯಾವೊಂದು ವಸ್ತು ಖರೀದಿಸಬಾರದು. ಚೀನಾ ಇದೀಗ ತನ್ನ ಉತ್ಪನ್ನಗಳಿಗೆ ಮೇಡ್ ಇನ್ ಚೀನಾ ಎಂದು ನಮೂದಿಸದೆ ಆರ್ಪಿಸಿ ಎಂದು ದಾಖಲಿಸುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ’ ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಕಾರ್ಯದರ್ಶಿ ವಿ.ಬಿ.ಪ್ರದೀಶ್ ಕುಮಾರ್ ಮಾತನಾಡಿ ‘ಬಲಿಪಾಡ್ಯಮಿಯಂದು ದೇವಸ್ಥಾನಗಳಲ್ಲಿ ಗೋ ಪೂಜೆ ಮಾಡಬೇಕು ಎಂದು ಸರ್ಕಾರ ಹೊರಡಿಸಿದ ಆದೇಶವನ್ನು ವಿಎಚ್ಪಿ ಸ್ವಾಗತಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೂ ಗೋ ಪೂಜೆ ಮಾಡಬೇಕು’ ಎಂದು ಕೋರಿದರು.
ವಿಭಾಗ ಅಧ್ಯಕ್ಷ ರಾಜೇಂದ್ರ ಬಾಬು, ಸಹ ಕಾರ್ಯದರ್ಶಿ ಮಹೇಶ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.