ಮೈಸೂರು: ‘ಸಂಗೀತ ನಿರ್ದೇಶಕ ಹಂಸಲೇಖ ಯಾವ ಮಹಾಪರಾಧವನ್ನು ಮಾಡಿಲ್ಲ. ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವವರು ಸ್ವಾಮಿ ವಿವೇಕಾನಂದರ ಕ್ಷಮೆ ಕೇಳಿಸುತ್ತಾರಾ?’ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಪುರುಷೋತ್ತಮ್ ಗುರುವಾರ ಇಲ್ಲಿ ಸವಾಲು ಹಾಕಿದರು.
‘ನಮಗೆ ಮಾತನಾಡುವ ಹಕ್ಕು ಇಲ್ವಾ? ನಮ್ಮ ಆಹಾರ ತಿನ್ನೋ ಹಕ್ಕು ಇಲ್ವಾ? ಇವರ ಅಟ್ಟಹಾಸ, ದೌರ್ಜನ್ಯ ಎಲ್ಲಿ ತನಕ ಇರಲಿದೆ? ಜಾತಿ–ಜಾತಿ, ಧರ್ಮ–ಧರ್ಮದ ನಡುವೆ ಎತ್ತಿ ಕಟ್ಟೋರು ಇರೋ ತನಕವೂ ಒಂದು ಭಾರತ ಸಾಧ್ಯವಿಲ್ಲ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.
‘ಸ್ವಾಮಿ ವಿವೇಕಾನಂದರು ಸಮಗ್ರ ಕೃತಿಗಳ ಸಂಪುಟ 3ರ ಪುಟ 536ರಲ್ಲಿ ‘ನಿಮಗೆ ಆಶ್ಚರ್ಯವಾಗಬಹುದು. ಪ್ರಾಚೀನ ಹಿಂದೂ ವಿಧಿ ಮತ್ತು ಆಚರಣೆಗಳ ಪ್ರಕಾರ, ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದೂ ಆಗಲು ಸಾಧ್ಯವಿರಲಿಲ್ಲ... ದನವನ್ನು ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಇರಲು ಸಾಧ್ಯವಿರಲಿಲ್ಲ’ ಎಂದು ಹೇಳಿದ್ದಾರೆ. ಹಾಗಾದರೆ ಸ್ವಾಮಿ ವಿವೇಕಾನಂದರ ಬಳಿಯೂ ಕ್ಷಮೆ ಕೇಳಿಸಿ. ಯಜ್ಞ, ಯಾಗಾದಿಗಳಲ್ಲಿ ದನವನ್ನು ತಿಂದು, ಇದೀಗ ಮಾಂಸಾಹಾರ ತಿನ್ನಬಾರದು ಎನ್ನುತ್ತಿರುವ ನಿಮ್ಮ ಕುತಂತ್ರಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಸಾಹಿತಿ ಸಿದ್ದಸ್ವಾಮಿ ಮಾತನಾಡಿ ‘ಶ್ರೀಕೃಷ್ಣ ಜಾತಿ ಪ್ರತಿಪಾದಕ. ಚತುರ್ವರ್ಣ ಪದ್ಧತಿ ಸೃಷ್ಟಿಸಿದವ. ದಲಿತರ ಕೇರಿಗೆ ಬರುವ ಬಲಿತರು ಶ್ರೀಕೃಷ್ಣನ ಆಶಯದೊಂದಿಗೆ ಬರಬಾರದು. ಗಾಂಧಿ-ಅಂಬೇಡ್ಕರ್ ಆಶಯದೊಂದಿಗೆ ಬರಬೇಕು. ಸನ್ಯಾಸಿಗಳು, ರಾಜಕಾರಣಿಗಳು, ಬಲಿತರು ದಲಿತರ ಕೇರಿಗೆ ಬಂದರೆ ಅಸ್ಪಶ್ಯತೆ ನಿರ್ಮೂಲನೆಯಾಗಲ್ಲ. ವಿವಾಹ ಸಂಬಂಧ ಬೆಳೆಸಿ. ದಲಿತ ಹೆಣ್ಣು ಮಕ್ಕಳನ್ನು ನಿಮ್ಮ ಮನೆಗೆ, ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ದಲಿತರ ಮನೆಗೆ ವಿವಾಹ ಮಾಡಿ ಕಳುಹಿಸಿಕೊಡಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.