ಹುಣಸೂರು: ‘ಗ್ರಾಮೀಣ ಜನರ ಆರೋಗ್ಯ ಸುಧಾರಣೆಗೆ ಉಚಿತ ಚಿಕಿತ್ಸಾ ಶಿಬಿರಗಳ ಅಗತ್ಯವಿದೆ’ ಎಂದು ಹೃದ್ರೋಗ ತಜ್ಞ ಡಾ.ಮುರಳೀಧರ್ ಹೇಳಿದರು.
ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ಶಿವ ಛತ್ರಪತಿ ಮರಾಠ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಮುಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ರಾಯಚೂರಿನ ಹೃದಯ ಚಿಕಿತ್ಸಾ ಆಸ್ಪತ್ರೆ ಹಮ್ಮಿಕೊಂಡಿದ್ದ ಉಚಿತ ಚಿಕಿತ್ಸೆ ಉದ್ಘಾಟಿಸಿ ಮಾತನಾಡಿದರು.
‘ಹುಟ್ಟೂರು ಗಾವಡಗೆರೆಯಲ್ಲಿ ಕಳೆದ 9 ವರ್ಷದಿಂದ ಜನ್ಮದಿನದಂದು ಗ್ರಾಮದ ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದೇನೆ. ಸ್ಥಳೀಯರ ಸೇವೆ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಹಾಗೂ ನಮ್ಮೂರ ಜನರಿಗೆ ಸೇವೆ ಮಾಡಿದ ನೆಮ್ಮದಿ ಸಿಗುತ್ತಿದೆ’ ಎಂದರು.
‘ಮುಳ್ಳೂರು ಪ್ರಾಥಮಿಕ ಆಸ್ಪತ್ರೆಗೆ ಇಸಿಜಿ ಯಂತ್ರ ಕೊಡುಗೆ ನೀಡಿದ್ದು, ಮುಂದಿನ ದಿನದಲ್ಲಿ ಸ್ಥಳಿಯ ಆಸ್ಪತ್ರೆಗೆ ಹೃದಯ ಸಂಬಂಧಿ ಕಾಯಿಲೆ ಪರೀಕ್ಷೆಗೆ ಬೇಕಾಗುವ ಅಗತ್ಯ ಯಂತ್ರವನ್ನು ಕೊಡುಗೆ ನೀಡುತ್ತೇನೆ’ ಎಂದು ತಿಳಿಸಿದರು.
300ಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆ ಮಾಡಲಾಯಿತು.
ಶಿಬಿರದಲ್ಲಿ ಡಾ.ಕಿರಣ್ ಕುಮಾರ್, ಡಾ.ದಿನೇಶ್ ಬಾಬು, ಡಾ.ಶ್ರೀಕಾಂತ್, ಭಾನುಮತಿ, ಸುರೇಶ್, ಶ್ರೀನಿವಾಸ್ ಸಿಂಧೆ, ಮಮತ, ಸವಿತ, ಸೌಂದರ್ಯ, ಹರ್ಷಿತ್ ಮರಾಠ ಸಮಿತಿಯ ಕಾರ್ಯದರ್ಶಿ ಜಿ.ವಿ.ಶ್ರೀನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.